ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸಧ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ, ಮಹಾರಾಷ್ಟ್ರದ ಹಿರಿಯ ಆಪ್ ನಾಯಕಿ ಅಂಜಲಿ ದಮಾನಿಯಾ ಆಪ್ ಗೆ ರಾಜೀನಾಮೆ ನೀಡಿದ್ದಾರೆ.
ನಾನು ಈ ವರೆಗೂ ಅರವಿಂದ್ ಕೇಜ್ರಿವಾಲರನ್ನು ಬೆಂಬಲಿಸಿಕೊಂಡು ಬಂದಿರುವುದು ತತ್ವಗಳಿಗಾಗಿಯೇ ಹೊರತು ಕುದುರೆ ವ್ಯಾಪಾರಕ್ಕೆ ಅಲ್ಲ ಎಂದು ಅವರು ಕೇಜ್ರಿವಾಲ್ ಮೇಲೆ ಆರೋಪ ಮಾಡಿದ್ದಾರೆ.
ನಾನು ಆಮ್ ಆದ್ಮಿ ಪಕ್ಷವನ್ನು ಬಿಡುತ್ತಿದ್ದೇನೆ. ಇಂತಹ ಒಂದು ಕುದುರೆ ವ್ಯಾಪಾರ ಕೃತ್ಯವನ್ನು ಬೆಂಬಲಿಸುವುದಕ್ಕಾಗಿ ನಾನು ಈ ಪಕ್ಷಕ್ಕೆ ಬಂದವಳಲ್ಲ. ಅರವಿಂದ್ ಕೇಜ್ರಿವಾಲ್ ಅವರನ್ನು ನಾನು ತತ್ವಗಳಿಗಾಗಿ ಬೆಂಬಲಿಸಿದ್ದೇನೆಯೇ ವಿನಾ ಕುದುರೆ ವ್ಯಾಪಾರಕ್ಕಾಗಿ ಅಲ್ಲ ಎಂದು ದಮಾನಿಯಾ ಕಿಡಿ ಕಾರಿದ್ದಾರೆ.
ಇನ್ನು 2014 ದೆಹಲಿ ಚುನಾವಣೆ ವೇಳೆ ನಡೆದಿದೆ ಎನ್ನಲಾಗುತ್ತಿರುವ ರಾಜೇಶ್ ಗಾರ್ಗ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ದೂರವಾಣಿ ಸಂಭಾಷಣೆ ಬಹಿರಂಗವಾದ ಬೆನ್ನಲ್ಲೇ ಅಂಜಲಿ ದಮಾನಿಯಾ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಟೆಲಿಫೋನ್ ದೂರವಾಣಿಯ ಆಡಿಯೋ ಟೇಪ್ ನಲ್ಲಿ ಸಾಕಷ್ಟು ವಿಚಾರಗಳನ್ನು ಚರ್ಚಿಸಲಾಗಿದೆ. ದೆಹಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕಾಂಗ್ರೆಸ್ ಶಾಸಕರನ್ನು ಪಕ್ಷದತ್ತ ಸೆಳೆದರೆ ತಮ್ಮ ಅಧಿಕಾರದ ಮಾರ್ಗ ಸುಗಮವಾಗುತ್ತದೆ ಎಂದು ರಾಜೇಶ್ ಸಲಹೆ ನೀಡಿದ್ದರಂತೆ. ಹೀಗಾಗಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಹವಣಿಸಿದ್ದ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಅಂಜಲಿ ದಮಾನಿಯಾ ಅವರು ಆಪ್ ಗೆ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಹೇಳಿಕೆಯೊಂದನ್ನು ನೀಡಿರುವ ಇನ್ನೋರ್ವ ಆಪ್ ನಾಯಕ ಯೋಗೇಂದ್ರ ಯಾದವ್, ತಾನು ಮತ್ತು ಪ್ರಶಾಂತ್ ಭೂಷಣ್ ಪಕ್ಷದ ಕಾರ್ಯಕರ್ತರಿಗೆ ಬಹಿರಂಗ ಪತ್ರವನ್ನು ಬರೆದಿರುವುದಾಗಿ ತಿಳಿಸಿದ್ದಾರೆ.
ಎಲ್ಲ ಆಪ್ ಕಾರ್ಯಕರ್ತರು ಶಾಂತಚಿತ್ತದಿಂದ ಇರುವಂತೆ ಮತ್ತು ಈ ವರೆಗಿನ ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆ ಚಿಂತನೆ ನಡೆಸುವಂತೆ ಯಾದವ್ ಕೋರಿದ್ದಾರೆ.
ನಮ್ಮ ಮೇಲಿನ ಆರೋಪದ ಬಗ್ಗೆ ತನಿಖೆಯಾಗಲಿ. ಪಕ್ಷದಲ್ಲಿನ ಆರೋಪ ಪ್ರತ್ಯಾರೋಪಕ್ಕೆ ಬೇಸರವಾಗಿದ್ದು, ಇನ್ನು ಮುಂದೆ ಮೌನದಿಂದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಪಕ್ಷದ ಆಂತರಿಕ ಲೋಕಪಾಲಕ್ಕೆ ಪತ್ರ ಬರೆದು ತಮ್ಮ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಗೆ ನಿಕಟರಾಗಿರುವ ನಾಲ್ವರು ಆಪ್ ನಾಯಕರು, ದೆಹಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಪ್ ಸೋಲು ಕಾಣಬೇಕೆಂಬಂತಹ ಪ್ರಯತ್ನಗಳನ್ನು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು.