ನವದೆಹಲಿ : ಆಮ್ ಆದ್ಮಿ ಪಕ್ಷದ ಆಂತರಿಕ ಭಿನ್ನಮತ ಸದ್ಯಕ್ಕೆ ಇನ್ನಷ್ಟು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಎದುರಿಸುತ್ತಿರುವ ಯೋಗೇಂದ್ರ ಯಾದವ್, ಶಾಂತಿ ಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ದೆಹಲಿ ಆಪ್ ಶಾಸಕರು ಆಗ್ರಹಿಸಿದ್ದಾರೆ.
ಇದೀಗ ಪಕ್ಷದ ಸೋಲು ಬಯಸಿದ ಆರೋಪ ಎದುರಿಸುತ್ತಿರುವ ಹಾಗೂ ಆಪ್ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾಗೊಂಡಿರುವ
ಯಾದವ್ ಹಾಗೂ ಭೂಷಣ್ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ಕರ್ವಾಲ್ ನಗರ ಶಾಸಕ ಕಪಿಲ್ ಮಿಶ್ರಾ ಅವರು, ಪಕ್ಷದ ತತ್ವ ಸಿದ್ಧಾತಂಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ಯಾರೇ ಆಗಿದ್ದರೂ ನಾವು ಸಹಿಸಿಕೊಳ್ಳುವುದಿಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಹೇಳಿದ್ದಾರೆ.
ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಹಾಗೂ ಶಾಂತಿ ಭೂಷಣ್ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದೇವೆ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
ಅಲ್ಲದೆ ಪತ್ರಕ್ಕೆ ಎಎಪಿ ಶಾಸಕರಿಂದ ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದನ್ನು ತಳ್ಳಿಹಾಕಿದ ಮಿಶ್ರಾ, ಪಕ್ಷದ ಎಲ್ಲಾ ಶಾಸಕರು ಸ್ವಇಚ್ಛೆಯಿಂದ ಸಹಿ ಹಾಕಿದ್ದಾರೆ ಎಂದು ತಿಳಿಸಿದರು.