ನವದೆಹಲಿ : ತೀವ್ರ ಬಂಡಾಯದ ಬಿಸಿಯನ್ನು ಎದುರಿಸುತ್ತಿರುವ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ಪಕ್ಷದ ಸದಸ್ಯರು ಮಾತ್ರವಲ್ಲದೇ ಪ್ರಗತಿಪರ ಸಾಹಿತಿಗಳೂ ತಿರುಗಿಬಿದ್ದಿದ್ದಾರೆ.
ಪ್ರಸ್ತುತ ಇರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾದ ಪಕ್ಷ ಅಸ್ಥಿತ್ವಕ್ಕೆ ಬರಬೇಕೆಂಬ ಅಭಿಪ್ರಾಯ ಹೊಂದಿದ್ದ ಸಾಹಿತಿ ದೇವನೂರು ಮಹಾದೇವ ಅವರೂ ಸಹ ಆಪ್ ನಲ್ಲಿ ಉಂಟಾಗಿರಿವ ಭಿನ್ನಮತದಿಂದ ಬೇಸತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ದೇವನೂರು ಮಹಾದೇವ, ದೇಶಕ್ಕೆ ಸಮರ್ಥ ವಿರೋಧ ಪಕ್ಷದ ಅಗತ್ಯವಿದೆ, ಆ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಆಪ್ ನ ಪರಿಸ್ಥಿತಿ ದುಸ್ವಪ್ನವಾಗಿದೆ. ಆಮ್ ಆದ್ಮಿ ಪಕ್ಷ ಜಗತ್ತಿಗೇ ಮಾದರಿ ಪ್ರಯೋಗವಾಗಬಹುದಿತ್ತು. ಅದು ವಿಫಲಗೊಂಡಿದೆ ಎಂದು ದೇವನೂರು ಮಹಾದೇವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಆಪ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗದಿರುವುದಕ್ಕೆ ಅರವಿಂದ್ ಕೇಜ್ರಿವಾಲ್ ಅವರನ್ನು ಹೇಡಿ ಎಂದು ದೇವನೂರು ಮಹಾದೇವ ಲೇವಡಿ ಮಾಡಿದ್ದಾರೆ. ಆಪ್ ನಲ್ಲಿ ಉಂಟಾಗಿರುವ ಭಿನ್ನಮತ ನೋಡಿದರೆ, ಆಪ್ ಅಧಿಕಾರಕ್ಕೆ ಬರಬಾರದು ಎಂಬ ಹೇಳಿಕೆ ನೀಡುವುದು ತಪ್ಪಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಪ್ರಶಾಂತ್ ಭೂಷಣ್ ಮುನ್ನಡೆಸಲಿ ಎಂದು ದೇವನೂರು ಮಹಾದೇವ ಸಲಹೆ ನೀಡಿದ್ದಾರೆ.