ನವದೆಹಲಿ : 'ಆಮ್ ಆದ್ಮಿ ಪಕ್ಷ'ದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ಮೂವರು ನಾಯಕರ ಜಾತಕ ಬಯಲಾಗಿದೆ.
ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್ ಅವರು ಕೆಲಸ ಮಾಡಿದ್ದರು ಎಂದು ಎಎಪಿಯ ಮುಖಂಡರಾದ ಮನೀಶ್ ಸಿಸೋಡಿಯಾ, ಗೋಪಾಲ್ ರಾಯ್, ಪಂಕಜ್ ಗುಪ್ತಾ ಹಾಗೂ ಸಂಜಯ್ ಸಿಂಗ್ ಮಂಗಳವಾರ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹರ್ಯಾಣದ ಉಸ್ತುವಾರಿ ವಹಿಸಿರುವ ಯೋಗೇಂದ್ರ ಯಾದವ್ ಅವರು ತಮ್ಮನ್ನು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಕೈಬಿಟ್ಟಿರುವುದಕ್ಕೆ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಳ್ಳಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ ಬೆನ್ನಲ್ಲೇ, ಯೋಗೇಂದ್ರ ಯಾದವ್ ಅವರು ಪಕ್ಷದ ವಿರುದ್ಧವೇ ಪ್ರಚಾರ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ದೆಹಲಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರ ಪ್ರಚಾರ ನಡೆಸದಂತೆ ಆಪ್ ಮುಖಂಡ ಪ್ರಶಾಂತ್ ಭೂಷಣ್ ಅವರು ವಿವಿಧ ರಾಜ್ಯಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದರು ಎಂದು ಆಪ್ ಆರೋಪಿಸಿದೆ.
ಅರವಿಂದ್ ಕೇಜ್ರಿವಾಲ್ ಗೆ ಪಾಠ ಕಲಿಸಬೇಕಿದೆ ಆದ್ದರಿಂದ ಪಕ್ಷದ ವಿರುದ್ಧ ಕೆಲಸ ಮಾಡಬೇಂಕೆಂದು ವಿವಿಧ ರಾಜ್ಯಗಳ ಮುಖಂಡರಿಗೆ ಪ್ರಶಾಂತ್ ಭೂಷಣ್ ಹೇಳಿದ್ದರು ಎಂದು ಆಪ್ ಬಿಡುಗಡೆ ಮಾಡಿರುವ ಪತ್ರದ ಮೂಲಕ ತಿಳಿದುಬಂದಿದೆ.
ಇನ್ನು ಯೋಗೇಂದ್ರ ಯಾದವ್ ವಿರುದ್ಧ ಅರವಿಂದ್ ಕೇಜ್ರಿವಾಲ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದ ಆರೋಪ ಕೇಳಿಬಂದಿದೆ.
ಇತ್ತೀಚೆಗಷ್ಟೇ ನಡೆದಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ರಾಜಕೀಯ ವ್ಯವಹಾರಗಳ ಸಮಿತಿಯಿಂದ ಕೈಬಿಡಲಾಗಿತ್ತು.