ತೆಲಂಗಾಣ : ಬಜೆಟ್ ಅಧಿವೇಶನದ ವೇಳೆ ರಾಷ್ಟ್ರಗೀತೆಗೆ ಅಗೌರವ ತೋರಿದ ಹಿನ್ನಲೆಯಲ್ಲಿ ತೆಲಂಗಾಣ ವಿಧಾನಸಭೆಯ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿಯ 10 ಮಂದಿ ಶಾಸಕರನ್ನು ಅಮಾನತು ಮಾಡಲಾಗಿದೆ.
ತೆಲಂಗಾಣದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಮುಗಿಯುವವರೆಗೂ ಈ 10 ಮಂದಿಯ ಮೇಲಿನ ಅಮಾನತು ಜಾರಿ ಇರುತ್ತದೆ. ಶನಿವಾರ 10 ಜನ ಶಾಸಕರು ರಾಷ್ಟ್ರಗೀತೆಗೆ ಗೌರವ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಷಮಾಪಣೆ ಕೇಳುವಂತೆ ಸೂಚಿಸಲಾಗಿತ್ತು. ಆದರೆ, ಅವರು ಕ್ಷಮೆಯಾಚನೆಗೆ ಒಪ್ಪಿರಲಿಲ್ಲ.
ಈ ನಿಟ್ಟಿನಲ್ಲಿ 10 ಸದಸ್ಯರನ್ನು ಅಮಾನತುಗೊಳಿಸಬೇಕೆಂದು ಸಂಸದೀಯ ವ್ಯವಹಾರಗಳ ಸಚಿವ ಹರೀಶ್ ರಾವ್ ಅವರು ನಿರ್ಣಯ ಮಂಡಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಶಾಸಕರ ಅಮಾನತು ಮಾಡಲು ಕೋರಿದ್ದರು.
ಇದನ್ನು ಅಂಗೀಕರಿಸಿದ ವಿಧಾನಸಭಾಧ್ಯಕ್ಷ ಮಧುಸೂದನಾಚಾರಿ 10 ಜನರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದರು. ಬಜೆಟ್ ಅಧಿವೇಶನ ಮುಗಿಯುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ.
ಟಿಡಿಪಿ ಶಾಸಕರಾದ ರಾಜೇಂದ್ರರೆಡ್ಡಿ, ವಿವೇಕಾನಂದ, ಗೋಪಿನಾಥ್, ದಯಾಶಂಕರ್ ರಾವ್, ಸಾಯಣ್ಣ, ವೆಂಕಟವೀರಯ್ಯ, ಅರಿಕಾಪುಡಿ ಗಾಂಧಿ, ಕೃಷ್ಣರಾವ್, ರೇವಂತ್, ಶಂಕರಗೌಡ ಅಮಾನತಾದವರು.