ಜಮ್ಮು-ಕಾಶ್ಮೀರ : ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಯಾವುದೇ ಕ್ರಿಮಿನಲ್ ಅಪರಾಧ ಎದುರಿಸದೇ, ಬಂಧಿನಕ್ಕೊಳಗಾಗಿರುವ ರಾಜಕೀಯ ಪ್ರಮುಖರನ್ನು ಬಿಡುಗಡೆ ಮಾಡಬೇಕೆಂದು ಮುಫ್ತಿ ಮೊಹಮದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿರುವುದಕ್ಕೆ ಪಾಕಿಸ್ತಾನ ಹಾಗೂ ಉಗ್ರರು ಕಾರಣ ಎಂದು ಹೇಳಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಮುಸ್ಲಿಮ್ ಲೀಗ್ ಹಾಗೂ ಹುರಿಯತ್ ಕಾನ್ಫರೆನ್ಸ್ ನ ಮುಖಂಡ ಮಸಾರತ್ ಅಲಮ್ ನ ಬಿಡುಗಡೆ ಮಾಡುವ ಉದ್ದೇಶದಿಂದ ಜಮ್ಮು-ಕಾಶ್ಮೀರ ಸಿ.ಎಂ ಈ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಸಾರತ್ ಅಲಮ್, 2010ರಲ್ಲಿ ನಡೆದಿದ್ದ ಕಲ್ಲುತೂರಾಟ ಹಾಗೂ ಕಣಿವೆಯಲ್ಲಿ ಶಾಂತಿ ಕದಡಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ 112 ಜನರು ಮೃತಪಟ್ಟಿದ್ದರು.
ಮುಫ್ತಿ ಮೊಹಮದ್ ಸಯೀದ್ ಹೇಳಿರುವ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿರುವ ರಾಜಕೀಯ ಪ್ರಮುಖ ಎಂದರೆ ಅದು ಮಸಾರತ್ ಅಲಮ್ ಮಾತ್ರ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜಮ್ಮು-ಕಾಶ್ಮೀರದ ಸಿ.ಎಂ ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಸಮ್ಮಿಶ್ರ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.