ನವದೆಹಲಿ : 'ಆಮ್ ಆದ್ಮಿ ಪಕ್ಷ'ದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಆಪ್ ಮುಖಂಡ ಯೋಗೇಂದ್ರ ಯಾದವ್ ಗೆ ಅರ್ಧಚಂದ್ರ ಮಾಡಲಾಗಿದೆ.
ಮಾ.4ರಂದು ನಡೆದ ಆಮ್ ಆದ್ಮಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಯೋಗೇಂದ್ರ ಯಾದವ್ ರನ್ನು ಕೈಬಿಡುವ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಆಂತರಿಕ ಭಿನ್ನಮತಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಸಮಿತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮೂಲಕ, ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಧ್ವನಿ ಎತ್ತಿದ್ದ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರಿಗೆ ಪಕ್ಷ ವಿರೋಧಿ ಕಾರ್ಯದ ನೆಪದಲ್ಲಿ ಶಿಕ್ಷೆ ವಿಧಿಸಿದಂತಾಗಿದೆ.
ಇನ್ನು ಮುಂದೆ ಈ ಇಬ್ಬರು ನಾಯಕರು ಪಕ್ಷದ ರಾಜಕೀಯ ನಿರ್ಧಾರಗಳಲ್ಲಿ ಭಾಗಿಯಾಗುವಂತಿಲ್ಲವಾದರೂ. ಈ ಇಬ್ಬರು ನಾಯಕರಿಗೆ ಹೊಸ ಹೊಣೆಯನ್ನು ಹೊರಿಸಲಾಗಿದೆ. ಪ್ರಶಾಂತ್ ಭೂಷಣ್ ಅವರಿಗೆ ಜನಲೋಕಪಾಲ್ ಜಾರಿ ಸಂಬಂಧಿತ ವಿಷಯಗಳ ಜವಾಬ್ದಾರಿ ನೀಡಲಾಗಿದ್ದರೆ, ಯೋಗೇಂದ್ರ ಯಾದವ್ ಅವರಿಗೆ ಕಿಸಾನ್ ಮೋರ್ಚಾದ ಹೊಣೆಯನ್ನು ಹೊರಿಸಲಾಗಿದೆ.
ಇದಕ್ಕೂ ಮುನ್ನ ಬೆಳಿಗ್ಗೆ ಪಕ್ಷದ ಸಂಚಾಲಕ ಹುದ್ದೆಗೆ ಅರವಿಂದ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ನಿಯಮದಡಿ ಕೇಜ್ರಿವಾಲ್ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಆದರೆ ಕಾರ್ಯಕಾರಿಣಿ ಸಭೆ ಕೇಜ್ರಿವಾಲ್ ರಾಜೀನಾಮೆಯನ್ನು ತಿರಸ್ಕರಿಸಿದೆ. ಆದ್ದರಿಂದ ರಾಷ್ಟ್ರೀಯ ಸಂಚಾಲಕರಾಗಿ ಅರವಿಂದ್ ಕೇಜ್ರಿವಾಲ್ ಮುಂದುವರೆಯಲಿದ್ದಾರೆ.