Untitled Document
Sign Up | Login    
Dynamic website and Portals
  
March 3, 2015

ಆಪ್‌ ನಲ್ಲಿ ಭಿನ್ನಮತ : ಭೂಷಣ್‌, ಯಾದವ್‌ ತಲೆದಂಡ ಸಾಧ್ಯತೆ

ನವದೆಹಲಿ : ಆಂತರಿಕ ಸಂಘರ್ಷದಿಂದ ತತ್ತರಿಸುತ್ತಿರುವ ಆಮ್‌ ಆದ್ಮಿ ಪಕ್ಷ ಭಿನ್ನಮತೀಯ ನಾಯಕರಾದ ಪ್ರಶಾಂತ ಭೂಷಣ ಮತ್ತು ಯೋಗೇಂದ್ರ ಯಾದವ್‌ ಅವರನ್ನು ಬುಧವಾರ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ವಜಾ ಮಾಡುವ ಸಾಧ್ಯತೆ ಇದೆ.

ಯಾದವ್‌ ಮತ್ತು ಭೂಷಣ್‌ ಆಪ್‌ ಸಂಚಾಲಕ ಹುದ್ದೆಯಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರನ್ನು ಕೆಳಗಿಳಿಸಲು ಸಂಚು ರೂಪಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಭೂಷಣ್‌ ಅವರು ಯೋಗೇಂದ್ರ ಯಾದವ್‌ ರನ್ನು ಪಕ್ಷದ ಸಂಚಾಲಕರನ್ನಾಗಿ ಮಾಡಬೇಕು ಎಂದಿದ್ದರು.

ಇದರ ಬೆನ್ನಲ್ಲೇ ಪಕ್ಷದ ಕೆಲ ಮುಖಂಡರು ಕೇಜ್ರಿವಾಲ್‌ ಎರಡೆರಡು ಹುದ್ದೆ ಹೊಂದಿರುವುದು ತಪ್ಪು. ಅವರು ದೆಹಲಿ ಸಿಎಂ ಹುದ್ದೆ ಮಾತ್ರ ಉಳಿಸಿಕೊಂಡು ಸಂಚಾಲಕ ಹುದ್ದೆಯನ್ನು ಬಿಟ್ಟುಕೊಡಬೇಕು ಎಂದು ಕೋರಿದ್ದರು. ಈ ಕುರಿತ ಆಂತರಿಕ ಪತ್ರಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದವು.

ಪಕ್ಷದ ವಕ್ತಾರ ಸಂಜಯ ಸಿಂಗ್‌, 'ಕೆಲ ಮುಖಂಡರು, ಪಕ್ಷಕ್ಕೆ ಜ್ವರದ ನಡುವೆಯೂ ಹಗಲಿರುಳು ದುಡಿದ ಕೇಜ್ರಿವಾಲ್‌ ರನ್ನು ಸಂಚಾಲಕ ಹುದ್ದೆಯಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಪಕ್ಷದ ಆಂತರಿಕ ಪತ್ರಗಳನ್ನು ಬಯಲು ಮಾಡಲಾಗುತ್ತಿದೆ. ಇದರಿಂದ ಪಕ್ಷವು ಒಂದು ರೀತಿ ಹಾಸ್ಯಾಸ್ಪದ ವಸ್ತುವಾಗುತ್ತಿದೆ' ಎಂದು ವಿಷಾದಿಸಿದರು.

ಈ ಹಿನ್ನೆಲೆಯಲ್ಲಿ ಬುಧವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಲಿದೆ. ಅಲ್ಲಿ ಈ ಎಲ್ಲ ವಿದ್ಯಮಾನಗಳು ಚರ್ಚೆ ಯಾಗಲಿವೆ. ಯಾವ ವ್ಯಕ್ತಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುತ್ತಾನೋ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, ಕಾರ್ಯಕಾರಿಣಿಯಲ್ಲಿ 21 ಸದಸ್ಯರು ಇದ್ದು, ಪ್ರಶಾಂತ ಭೂಷಣ್‌ ಮತ್ತು ಯೋಗೇಂದ್ರ ಯಾದವ್‌ ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು.

ಆದರೆ, ಯಾವ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಇವರು ನೇರವಾಗಿ ಹೇಳಲಿಲ್ಲ. ಮೂಲಗಳ ಪ್ರಕಾರ ಅಂದು ಪ್ರಶಾಂತ ಭೂಷಣ್‌ ಮತ್ತು ಯಾದವ್‌ ವಿರುದ್ಧ ಕ್ರಮ ಜರಗಿಸುವ ಸಾಧ್ಯತೆ ಇದೆ.

ಕೇಜ್ರಿವಾಲ್‌ ಅವರು ಹಿಂದಿನ ಕಾರ್ಯಕಾರಿಣಿ ಸಭೆಯಲ್ಲಿ ರಾಜೀನಾಮೆಗೆ ಮುಂದಾಗಿದ್ದು ನಿಜ. ಆದರೆ 17 ಸದಸ್ಯರು ರಾಜೀನಾಮೆಗೆ ವಿರೋಧಿಸಿದರು. ಕೇಜ್ರಿವಾಲ್‌ ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಬೇಕು ಎಂಬುದು ಕಾರ್ಯಕರ್ತರ ಒತ್ತಾಸೆ ಆಗಿದೆ.

ರಾಜೀನಾಮೆಗೆ ಒತ್ತಾಯಿಸುತ್ತಿರುವ ಸದಸ್ಯರು ಇದನ್ನು ಅರಿಯಬೇಕು. ಕೇಜ್ರಿವಾಲ್‌ ಇಲ್ಲದೇ ಪಕ್ಷ ಹೇಗೆ ಮುನ್ನಡೆಯಲು ಸಾಧ್ಯ ಎಂದು ಸಂಜಯ ಸಿಂಗ್‌ ಪ್ರಶ್ನಿಸಿದರು.
ಕಳೆದ ವಾರ ಪಕ್ಷದ ಕಾರ್ಯಕಾರಿಣಿಗೆ ಪತ್ರ ಬರೆದಿದ್ದ ಭೂಷಣ್‌, 'ಪಕ್ಷವು ಏಕವ್ಯಕ್ತಿ ಕೇಂದ್ರಿತವಾಗುತ್ತಿದೆ. ಇದರಿಂದಾಗಿ ಇತರ ಪಕ್ಷಗಳಿಗೂ ಆಪ್‌ ಗೂ ವ್ಯತ್ಯಾಸವೇನೂ ಉಳಿಯಲ್ಲ. ಅಧಿಕಾರ ವಿಕೇಂದ್ರೀಕರಣದ ಸ್ವರಾಜ್‌ ವ್ಯವಸ್ಥೆ ಪಕ್ಷದೊಳಗೂ ಬರಬೇಕು' ಎಂದಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited