ನವದೆಹಲಿ : ಆಮ್ ಆದ್ಮಿ ಪಕ್ಷದ ನಾಯಕರೊಳಗಿನ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಅದಕ್ಕೆ ತೇಪೆ ಹಾಕುವ ಪ್ರಯತ್ನಗಳೂ ನಡೆಯುತ್ತಿವೆ.
ಈ ನಡುವೆ ಭಿನ್ನಮತೀಯ ನಾಯಕ ಯೋಗೇಂದ್ರ ಯಾದವ್ ಅವರು ಅರವಿಂದ್ ಕೇಜ್ರಿವಾಲ್ ಆಪ್ನ ಭರವಸೆಯ ಪ್ರತೀಕವಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ಈ ಬಗೆಯ ಭಿನ್ನಮತದ ಅಗ್ನಿ ಪರೀಕ್ಷೆಯಿಂದ ಮಾತ್ರವೇ ನಾವು ಯಶಸ್ವಿಯಾಗಿ ಹೊರಬರಲು ಸಾಧ್ಯವಿದ್ದು ಇತರ ಪಕ್ಷಗಳಿಗಿಂತ ನಾವು ವಿಭಿನ್ನ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆ. ರಾಜಕೀಯ ಪಕ್ಷವೆಂದರೆ ಕಷ್ಟಗಳು, ಸಂಕಷ್ಟಗಳು ಬರುತ್ತಲೇ ಇರುತ್ತವೆ ಮತ್ತು ಯಾವತ್ತೂ ಪಕ್ಷ ನಾಯಕರಲ್ಲಿ ಭಿನ್ನಮತ ಇರುತ್ತದೆ. ನಾವೆಲ್ಲ ಅದನ್ನು ಅರಿತುಕೊಂಡು ಅದನ್ನು ಮೀರಿ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇಂದು ಆಮ್ ಆದ್ಮಿ ಪಕ್ಷದ 21ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಆಪ್ ನ ಇಬ್ಬರು ಹಿರಿಯ ನಾಯಕರಾಗಿರುವ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಭವಿಷ್ಯವು ತೀರ್ಮಾನವಾಗಲಿದೆ.
ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿರುತ್ತಾ ಪಕ್ಷದ ಸಂಚಾಲಕ ಹುದ್ದೆಯನ್ನೂ ಹೊಂದಿರುವುದು ಸರಿಯಲ್ಲ ಎಂಬುದು ಒಂದು ವಿಷಯವಾದರೆ ಆಮ್ ಆದ್ಮಿ ಪಕ್ಷ ಕೇವಲ ದಿಲ್ಲಿಗೆ ಮಾತ್ರವೇ ಸೀಮಿತವಾಗಿರಬೇಕೇ ಅಥವಾ ಇತರ ರಾಜ್ಯಗಳಿಗೂ ತನ್ನ ಜಾಲವನ್ನು ವಿಸ್ತರಿಸಬೇಕೇ ಎಂಬುದು ಇನ್ನೊಂದು ಮುಖ್ಯ ವಿಷಯವಾಗಿ ಕಾರ್ಯಕಾರಿಣಿಯಲ್ಲಿ ಚರ್ಚಿತವಾಗಲಿದೆ.