ನವದೆಹಲಿ : ದೆಹಲಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಅಪರಾಧಿ ಸಂದರ್ಶನ ಮಾಡಲು ಬಿಬಿಸಿಗೆ ಅನುಮತಿ ನೀಡಿದ್ದ ವಿಷಯ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ್ದು, ಕೋಲಾಹಲ ಉಂಟಾಗಿದೆ.
ಓರ್ವ ಅತ್ಯಾಚಾರಿಯ ಸಂದರ್ಶನ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಕಿಡಿಕಾರಿದ್ದು, ರಾಜ್ಯಸಭೆ ಕಲಾಪದಲ್ಲಿ ಗದ್ದಲ ಉಂಟುಮಾಡಿದ್ದವು. ತೀವ್ರ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿದೆ.
ಸಂದರ್ಶನಕ್ಕೆ ಅನುಮತಿ ನೀಡಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಸಂದರ್ಶನ ಪ್ರಸಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂದರ್ಶನಕ್ಕೆ ಅನುಮತಿ ನೀಡಿರುವುದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂದರ್ಶನಕ್ಕೆ ಅನುಮತಿ ನೀಡಿರುವುದು ಸರಿಯಲ್ಲ, ಯುಪಿಎ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿರುವ ಸಾಧ್ಯತೆ ಇದೆ ಎಂದು ನಖ್ವಿ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣಗಳು ನಡೆಯಲು ಮಹಿಳೆಯರೇ ಕಾರಣ ಎಂದು ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಬಿಸಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದ. ಅಲ್ಲದೇ ರಾತ್ರಿ 9 ಗಂಟೆಯ ನಂತರವೂ ಹುಡುಗಿಯರು ತಮ್ಮ ಪ್ರಿಯಕರನ ಜತೆಗೆ ಸುತ್ತಾಡಿದರೆ ಅವರು ರೇಪಿಸ್ಟ್ ಗಳು ಮತ್ತು ಗ್ಯಾಂಗ್ ಸ್ಟರ್ಗಳ ದಾಳಿಗೆ ಗುರಿಯಾಗುವುದ ಸಹಜವೇ ಎಂದು ಅಭಿಪ್ರಾಯಪಟ್ಟಿದ್ದ. ಅಲ್ಲದೇ ತನ್ನ ಮೇಲೆ ರೇಪ್ ನಡೆಯುತ್ತಿರುವಾಗ ಹುಡುಗಿಯರು ಪ್ರತಿರೋಧ ತೋರದೆ ಸಹಕರಿಸಬೇಕು. ಆಗ ಅವರಿಗೆ ಪ್ರಾಣ ಬೆದರಿಕೆ ಇರುವುದಿಲ್ಲ ಎಂದೂ ಹೇಳಿದ್ದ.
ಇದು ತೀವ್ರ ವಿವಾದಕ್ಕೆ ಕಾರಣವಾಗಿ ಬಿಬಿಸಿಗೆ ರೇಪಿಸ್ಟ್ ನ್ನು ಸಂದರ್ಶನ ಮಾಡುವ ಅನುಮತಿ ನೀಡಿದ್ದು ಯಾರು ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದೆ.