ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಶೇ.26ರಷ್ಟು ಹೆಚ್ಚಾಗಿದೆ ಎಂದು ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ತೆಲಂಗಾಣ, ಜಾರ್ಖಂಡ್ ನಂತರದ ಸ್ಥಾನ ಗಳಿಸಿವೆ. 2012ರಲ್ಲಿ 1,046 ರೈತರು, 2013ರಲ್ಲಿ 879 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು, ಈ ಅಂಕಿ ಅಂಶಗಳು 2014ನೇ ಸಾಲಿನಲ್ಲಿ ಏರಿಕೆಯಾಗಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವ ಮೋಹನ್ ಭಾಯ್ ಕುಂಡಾರಿಯಾ ಸಂಸತ್ ಗೆ ತಿಳಿಸಿದ್ದಾರೆ.
ಬರಗಾಲದಿಂದಾಗಿ ರೈತರಿಗೆ ಸಮಸ್ಯೆ ಉಂಟಾಗಿದ್ದು, ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಕೃಷಿ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಕೃಷಿ ಅಭಿವೃದ್ಧಿಗಾಗಿ, ರಾಜ್ಯ ಸರ್ಕಾರಗಳೇ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಆದರೆ ಇಂಡಿಯಾ ಟುಡೆ ಈ ವಿಷಯದ ಬಗ್ಗೆ ಪ್ರಕಟಿಸಿರುವ ವರದಿಯ ತಲೆಬರಹದಲ್ಲಿ 2014ನೇ ಸಾಲಿನಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿರುವುದಕ್ಕೆ ಮೋದಿ ಸರ್ಕಾರವೇ ಕಾರಣ ಎಂಬಂತೆ ಬಿಂಬಿಸಲಾಗಿದೆ. ಮೋದಿ ಸರ್ಕಾರದ ಅಚ್ಚೇ ದಿನ್? ಇದೇನಾ ಎಂಬಂತೆ ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿಯ ತಲೆಬರಹ ಪ್ರಕಟಿಸಿದೆ.
2014ರ ಏಪ್ರಿಲ್ ನಲ್ಲಿ ನಡೆದ ಚುನಾವಣೆ ಬಳಿಕ ಅಸ್ಥಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇನ್ನೂ ಒಂದು ವರ್ಷವನ್ನೂ ಪೂರ್ಣಗೊಳಿಸಿಲ್ಲ. ಆಗಲೇ ಇಡಿ ಸಾಲಿನಲ್ಲಿ ನಡೆದಿರುವ ರೈತರ ಆತ್ಮಹತ್ಯೆಗೆ ಮೋದಿ ಸರ್ಕಾರ ಹೇಗೆ ಸಂಪೂರ್ಣವಾಗಿ ಹೊಣೆಯಾಗುತ್ತದೆ ಎಂಬ ಪ್ರಶ್ನೆ ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆಯ ವರದಿ ಓದಿದವರನ್ನು ಕಾಡುತ್ತಿದೆ.