ನವದೆಹಲಿ : 'ಬಿಸಿಸಿಐ' ಅಧ್ಯಕ್ಷ ಸ್ಥಾನಕ್ಕೆ ಲಾಭಿ ಪ್ರಾರಂಭವಾಗಿದೆ. ಅಧ್ಯಕ್ಷಗಾದಿಯನ್ನು ಮತ್ತೊಮ್ಮೆ ಅಲಂಕರಿಸಲು ಯತ್ನಿಸುತ್ತಿರುವ ಎನ್.ಸಿ.ಪಿ ನಾಯಕ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಬಿಸಿಸಿಐ ಚುನಾವಣೆ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದ್ದು, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸುವ ಕುರಿತು ಶರದ್ ಪವಾರ್ ಮೋದಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ.
ಮಾರ್ಚ್.2ರಂದು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸರ್ವಾನುಮತದಿಂದ ಆಯ್ಕೆಯಾಗಬೇಕೆಂದು ಶರದ್ ಪವಾರ್ ಯತ್ನಿಸುತ್ತಿದ್ದಾರೆ. ಇಂಡಿಯಾ ಟು ಡೆ ಅಂತರ್ಜಾಲ ಪತ್ರಿಕೆ ವರದಿಗಳ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಶರದ್ ಪವಾರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವುದರಿಂದ ಬಿಸಿಸಿಐ ಅಧ್ಯಕ್ಷ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕೆಂಬ ಬಗ್ಗೆ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.
ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಬಿಸಿಸಿಐನ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಹೆಸರು ಕೇಳಿಬಂದಿದ್ದರಿಂದ, ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವಂತೆ ಸುಪ್ರೀಂ ಕೋರ್ಟ್, ಶ್ರೀನಿವಾಸನ್ ಗೆ ಸೂಚನೆ ನೀಡಿತ್ತು. ಶ್ರೀನಿವಾಸನ್ ರಾಜೀನಾಮೆಯಿಂದ ತೆರವುಗೊಂಡಿರುವ ಸ್ಥಾನಕ್ಕೆ ಮಾರ್ಚ್.2ರಂದು ಚುನಾವಣೆ ನಡೆಯಲಿದೆ.