ನವದೆಹಲಿ : ದೇಶವನ್ನು ನಿರ್ಮಾಣ ಮಾಡಿದ್ದು ಕೇವಲ ಸರ್ಕಾರ ಮಾತ್ರವಲ್ಲ. ಕಾರ್ಮಿಕರು, ರೈತರು ದೇಶವನ್ನು ನಿರ್ಮಾಣ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಮಂಗಳವಾರ ರಾಜ್ಯಸಭೆಯಲ್ಲಿ ಉತ್ತರಿಸಿದ ಪ್ರಧಾನಿ ಮೋದಿ, ವಿಪಕ್ಷಗಳ ಪ್ರತಿಯೊಂದು ಆಕ್ಷೇಪಕ್ಕೂ ಪ್ರತಿಕ್ರಿಯೆ ನೀಡಿದರು. ಇಡೀ ದೇಶ ಭ್ರಷ್ಟಾಚಾರ ಮುಕ್ತವಾಗಬೇಕು. ಸರ್ಕಾರವನ್ನು ಕಾನೂನಿನಡಿಯಲ್ಲಿ ನಡೆಸುತ್ತಿದ್ದೇವೆ. ಪ್ರಜಾಪ್ರಭುತ್ವಕ್ಕೆ ಯಾರಿಂದಲೂ ಬಾಧೆ ಬರಬಾರದು ಎಂದರು.
ಸಾಮಾಜಿಕ ಸಮಸ್ಯೆಗಳತ್ತ ಗಮನಹರಿಸಬೇಕಿದೆ. ದೇಶದೆ ಅಭಿವೃದ್ಧಿಗೆ ಎಲ್ಲರ ಸಹಕಾರವೂ ಅಗತ್ಯ. ಪಕ್ಷಗಳಿಗಿಂತ ಹೆಚ್ಚು ರಾಜ್ಯಗಳ ಮೇಲೆ ನಮಗೆ ಜವಾಬ್ದಾರಿ ಇರಬೇಕು. ಸಮಸ್ಯೆಗಳು ತುಂಬಾಹಳೆಯವು. ಅವುಗಳಿಗೆ ಪರಿಹಾರ ಹುಡುಕಬೆಕಿದೆ, ನಮಗೆಲ್ಲಗೊತ್ತು, ಎಲ್ಲವೂ ಬರುತ್ತದೆ ಎಂಬ ಮನೋಭಾವ ನಮ್ಮದಲ್ಲ. ನಮ್ಮಲ್ಲೂ ಕೆಲ ಸಮಸ್ಯೆಗಳಿವೆ. ಎಲ್ಲರೂ ಸೇರಿ ಸರಿಪಡಿಸೋಣ ಎಂದು ಸಂಸದರಿಗೆ ಕರೆ ನೀಡಿದರು.
14 ವರ್ಷಗಳ ಕಾಲ ಗುಜರಾತ್ ನಲ್ಲಿ ನನಗೆ ಧಮಕಿ ಹಾಕಿದ್ರು. ಜೈಲಿಗೆ ಕಳಿಸುವುದಾಗಿ ಪ್ರತಿದಿನ ಬೆದರಿಕೆ ಹಾಕಲಾಗುತ್ತಿತ್ತು. ಈ ರೀತಿ ಧಮಕಿ ಹಾಕೋ ಸಂಸ್ಕೃತಿ ಯಾರದ್ದೆಂದು ಜನತೆಗೆ ಚೆನ್ನಾಗಿ ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಯಾರ ಧಮಕಿಯೂ ನಡೆಯುವುದಿಲ್ಲ, ನಡೆಯಲು ಸಾಧ್ಯವೂ ಇಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ನಮ್ಮ ಸರ್ಕಾರ ಕಾರ್ಪೊರೇಟ್ ಓಲೈಕೆ ಮಾಡುತ್ತಿಲ್ಲ. ಸ್ವಚ್ಛ ಭಾರತ ಆಂದೋಲನ, ಜನಧನ್ ಯೋಜನೆ, ಬಡವರಿಗೆ ಸೂರು ಯೋಜನೆಗಳನ್ನು ಉದ್ಯಮಿಗಳಿಗಾಗಿ ಜಾರಿಗೆ ತಂದಿದ್ದಲ್ಲ. ದೇಶದಲ್ಲಿನ ಬಡತನ ನಿರ್ಮೂಲನೆಗಾಗಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಹೇಳಿದರು.
ಎನ್ ಡಿಎಸ್ ಸರ್ಕಾರದ ಯೋಜನೆಗಳಿಗೆ ಯುಪಿಎ ಸರ್ಕಾರದ ಹೆಸರನ್ನು ಹಾಕಿ ಯೋಜನೆಗಳು ತಮ್ಮದೆಂದು ಯುಪಿಎ ಸರ್ಕಾರ ಬಿಂಬಿಸಸಿಕೊಂಡಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಯೋಜನೆಗಳಿಗೆ ಯುಪಿಎ ಹೆಸರು ಬದಲಾಯಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.