ನವದೆಹಲಿ : ಪಿಡಿಪಿ ಶಾಸಕರಿಗೆ ಸಂಸತ್ ದಾಳಿ ಪ್ರಕರಣದ ರೂವಾರಿ ಉಗ್ರ ಅಫ್ಜಲ್ ಗುರುವಿನ ಅವಶೇಷ ಕೇಳುವ ಹಕ್ಕಿಲ್ಲ ಎಂದು ಖ್ಯಾತ ಸಾಹಿತಿ ಮತ್ತು ರಾಜ್ಯಸಭಾ ಶಾಸಕ ಜಾವೆದ್ ಅಖ್ತರ್ ಹೇಳಿದ್ದಾರೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯೀದ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಸಂಸತ್ ಮೇಲಿನ ದಾಳಿ ಪ್ರಕರಣದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ ಅಫ್ಜಲ್ ಗುರು ಅವಶೇಷಗಳನ್ನು ತಮಗೆ ನೀಡಬೇಕೆಂದು ಪಿಡಿಪಿಯ ಕೆಲವು ಶಾಸಕರು ಪಟ್ಚು ಹಿಡಿದಿದ್ದರು.
ಪಿಡಿಪಿಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಾವೆದ್ ಅಖ್ತರ್, ಉಗ್ರ ಅಫ್ಜಲ್ ಗುರುವಿನ ಪಾರ್ಥೀವ ಶರೀರದ ಅವಶೇಷ ಕೇಳುವ ಹಕ್ಕು ಆತನ ಕುಟುಂಬಸ್ಥರಿಗೆ ಮಾತ್ರ ಇದ್ದು, ಪಿಡಿಪಿ ಶಾಸಕರಿಗೆ ಅಫ್ಜಲ್ ಗುರು ಶರೀರದ ಅವಶೇಷ ಕೇಳುವ ಹಕ್ಕು ಇಲ್ಲ. ಒಂದು ವೇಳೆ ಅಫ್ಜಲ್ ಗುರುವಿನ ಕುಟುಂಬಸ್ಥರು ಕೇಳಿದರೆ ಅವರಿಗೆ ಅವಶೇಷಗಳನ್ನು ನೀಡಬಹುದು. ಈ ಕುರಿತಂತೆ ಗೊಂದಲಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
'ಕಣಿವೆ ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಯಲು ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಕಾರಣ. ಶಾಂತಿಯುತ ಮತದಾನಕ್ಕಾಗಿ ಭಯೋತ್ಪಾಕದ ಸಂಘಟನೆಗಳು ಶ್ರಮಿಸಿದ್ದವು' ಎಂದು ಮುಫ್ತಿ ಮೊಹಮದ್ ಹೇಳಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಿಡಿಪಿಯ ಕೆಲ ಶಾಸಕರು ಮತ್ತೆ ವಿವಾದಾತ್ಮಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಚರ್ಚಿಸುವ ಮೂಲಕ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತಿದ್ದಾರೆ.