ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ಕುರಿತು ಮೌನ ಮುರಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಕ್ಷದಲ್ಲಿನ ಬೆಳವಣಿಗೆಗಳಿಂದ ತೀವ್ರ ದು:ಖಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, "ಪಕ್ಷದಲ್ಲಿನ ಬೆಳವಣಿಗೆಗಳನ್ನು ಕಂಡು ನನಗೆ ಆಘಾತವಾಗಿವೆ ಮತ್ತು ಅತ್ಯಂತ ಹೆಚ್ಚು ನೋವಾಗಿದೆ. ದೆಹಲಿ ನಮಗೆ ಕೊಟ್ಟ ಅವಕಾಶಕ್ಕೆ ಬಗೆಯುತ್ತಿರುವ ದ್ರೋಹ ಇದು" ಎಂದು ಹೇಳಿದ್ದಾರೆ.
ಈ ಕೆಟ್ಟ ಜಗಳದಲ್ಲಿ ಸೇರಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವತ್ತ ಮಾತ್ರ ನಾನು ಗಮನ ಹರಿಸುತ್ತೇನೆ. ದೆಹಲಿ ಜನತೆಯ ಭರವಸೆ ಹುಸಿಗೊಳಿಸುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಏಕವ್ಯಕ್ತಿ ಕೇಂದ್ರ ಆಡಳಿತ ಶೈಲಿಯ ಬಗ್ಗೆ ಪಕ್ಷದ ಹಿರಿಯ ಮುಖಂಡರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಪ್ರಶ್ನಿಸಿದ್ದರು. ಈ ಇಬ್ಬರೂ ಮುಖಂಡರನ್ನು ಉನ್ನತ ಸಮಿತಿಯಿಂದ ಹೊರಹಾಕುವ ಪ್ರಯತ್ನವೂ ನಡೆದಿತ್ತು.