ನವದೆಹಲಿ : ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪಲಗಾಂವ್ನಲ್ಲಿರುವ ದೇಶದ ಅತಿ ದೊಡ್ಡ ಸೇನಾ ಕೇಂದ್ರ ಶಸ್ತ್ರಾಸ್ತ್ರ ಡಿಪೋದಲ್ಲಿ ಸಂಭವಿಸಿರುವ ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದು:ಖ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮಹಾರಾಷ್ಟ್ರದ ಪಲ್ಗಾಂವ್ನ ಕೇಂದ್ರೀಯ ಮದ್ದುಗುಂಡು ಸಂಗ್ರಹಾಗಾರದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಆಗಿರುವ ಪ್ರಾಣಹಾನಿಯಿಂದ ನೋವಾಗಿದೆ. ಮೃತರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ದುರ್ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವೆ’ ಎಂದು ತಿಳಿಸಿದ್ದಾರೆ.
‘ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದೇನೆ’ ಎಂದೂ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇಂದು ನಸುಕಿನ ವೇಳೆಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು 15 ಯೋಧರು ಸೇರಿ 17 ಮಂದಿ ಸಜೀವಸಾ ದಹನವಾಗಿದ್ದರು. ಘಟನೆಯಲ್ಲಿ ಇತರ 17ಮಂದಿ ಗಾಯಗೊಂಡಿದ್ದಾರೆ.
ನಸುಕಿನ ಜಾವ 1.30ರ ವೇಳೆಗೆ ದುರಂತ ಸಂಭವಿಸಿದ್ದು, ಮದ್ದುಗುಂಡುಗಳು ಭಾರಿ ಪ್ರಮಾಣದಲ್ಲಿ ಸ್ಪೋಟಗೊಂಡಿವೆ. ಎಕೆ 47, ಬ್ರಹ್ಮೋಸ್ ಕ್ಷಿಪಣಿಗಳು ಕೂಡಾ ಸಂಗ್ರಹಾಗಾರದಲ್ಲಿ ಇದ್ದವು. 10 ಅಗ್ನಿಶಾಮಕ ವಾಹನಗಳು ಬೆಂಕಿ ಹತೋಟಿಗೆ ತರಲು ಪ್ರಯತ್ನಿಸುತ್ತಿವೆ.