ಶ್ರೀನಗರ : ಅಧಿಕಾರಕ್ಕೆ ಬಂದ ಮೊದಲ ದಿನವೇ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲು ಪಾಕಿಸ್ಥಾನ ಉಗ್ರರು ಕಾರಣ ಎಂಬ ಹೇಳಿಕೆ ನೀಡಿ ಮಿತ್ರ ಪಕ್ಷ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದ್ದ ಪಿಡಿಪಿ ಎರಡನೇ ದಿನವೂ ಮತ್ತೂಂದು ಶಾಕ್ ನೀಡಿದೆ. ಸಂಸತ್ ಭವನದ ದಾಳಿ ಪ್ರಕರಣದ ರೂವಾರಿ, ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾದ ಅಫ್ಜಲ್ ಗುರು ಶವವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಬೇಕೆಂಬ ಹೊಸ ಬೇಡಿಕೆಯನ್ನು ಪಿಡಿಪಿ ಮುಂದಿಟ್ಟಿದೆ.
ಅಧಿಕಾರಕ್ಕೆ ಬಂದ ಎರಡನೇ ದಿನವೇ ಪಿಡಿಪಿ ಶಾಸಕರ ಗುಂಪೊಂದು ಇಟ್ಟಿರುವ ಈ ಬೇಡಿಕೆಯಿಂದ ಜಮ್ಮು-ಕಾಶ್ಮೀರದಲ್ಲಿನ ಪಿಡಿಪಿ ಹಾಗೂ ಬಿಜೆಪಿ ಮೈತ್ರಿ ಸರಕಾರ ಅವಧಿ ಪೂರ್ಣಗೊಳಿಸುವ ಬಗ್ಗೆಯೇ ಅನುಮಾನಗಳು ಏಳಲು ಆರಂಭಿಸಿವೆ.
ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದು ತಪ್ಪು. ಸಾಂವಿಧಾನಿಕ ಅಗತ್ಯತೆ ಹಾಗೂ ಪ್ರಕ್ರಿಯೆಗಳನ್ನು ಆ ಸಂದರ್ಭದಲ್ಲಿ ಪಾಲಿಸಲಾಗಿಲ್ಲ. ಹೀಗಾಗಿ ಆತನ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ. ಗುರುವನ್ನು ಗಲ್ಲಿಗೇರಿಸುವಂತೆ ಈ ಹಿಂದೆ ಯುಪಿಎ ಸರಕಾರದ ಮೇಲೆ ಬಿಜೆಪಿ ಹಲವು ಬಾರಿ ಒತ್ತಡ ಹೇರಿತ್ತು. ಪಿಡಿಪಿ ಶಾಸಕರ ಹೇಳಿಕೆಯಿಂದ ಬಿಜೆಪಿ ಮುಜುಗರಕ್ಕೆ ಸಿಲುಕುವಂತಾಗಿದೆ.
2013ರ ಫೆ. 9ರಂದು ತಿಹಾರ್ ಜೈಲಿನಲ್ಲಿ ರಹಸ್ಯವಾಗಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ, ಆತನ ಶವವನ್ನು ಜೈಲಿನ ಆವರಣದಲ್ಲಿಯೇ ಹೂಳಲಾಗಿತ್ತು.