ಬೆಂಗಳೂರು : ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜುಲೈ 25 ರಿಂದ ರಾಜ್ಯಾದ್ಯಂತ ಮುಷ್ಕರ ಹೂಡಲು ಮುಂದಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಷ್ಕರ ಕೈಬಿಟ್ಟು, ಸಾರ್ವಜನಿಕ ಹಿತಕ್ಕೆ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದಾರೆ.
ಇಡೀ ರಾಷ್ಟ್ರದಲ್ಲಿಯೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿ ಹಾಗೂ ಗೌರವಗಳಿಗೆ ಪಾತ್ರವಾಗಿರುವ ನಮ್ಮ ಕರ್ನಾಟಕದಲ್ಲಿ ಉತ್ತಮ ಬಸ್ಸುಗಳು ಮಾತ್ರವಲ್ಲ, ಅತ್ಯುತ್ತಮ ಚಾಲಕರು, ನಿರ್ವಾಹಕರು, ಯಾಂತ್ರಿಕ ಹಾಗೂ ಇತರೆ ಸಿಬ್ಬಂದಿಯೂ ಇದ್ದಾರೆ ಎಂಬುದು ನನ್ನಲ್ಲಿ ಅಭಿಮಾನ ಹಾಗೂ ಹೆಮ್ಮೆಯನ್ನು ಮೂಡಿಸಿದೆ.
ಬಸ್ಸುಗಳನ್ನು ಸ್ಥಗಿತಗೊಳಿಸಿದಲ್ಲಿ ಸಾರ್ವಜನಿಕರಿಗೆ, ವಿಶೇಷವಾಗಿ ಬಸ್ಸುಗಳನ್ನೇ ಅವಲಂಭಿಸಿರುವ ಬಡವರು ಹಾಗೂ ಕಡು ಬಡವರು, ವಿದ್ಯಾರ್ಥಿಗಳು ಹಾಗೂ ಶ್ರಮಿಕ ವರ್ಗಕ್ಕೆ ಎದುರಾಗುವ ಕಷ್ಟ-ಸಂಕಷ್ಟಗಳನ್ನು ಊಹಿಸಲು ಅಸಾಧ್ಯ. ಚಿಕಿತ್ಸೆ ಪಡೆಯಲು ಹಾಗೂ ಚಿಕಿತ್ಸೆ ಕೊಡಿಸಲು ಊರಿಂದ ಊರಿಗೆ ಪ್ರತಿ ದಿನವೂ ಆಸ್ಪತ್ರೆಗಳಿಗೆ ತೆರಳುವ ಬಡ ಜನತೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ತಾವು ನಡೆಸಲಿರುವ ಮುಷ್ಕರದಿಂದ ಅವರೆಲ್ಲರ ಮೇಲೆ ಬೀರುವ ಪರಿಣಾಮ ತಮ್ಮಲ್ಲಿ ಸಂತಸ ತರಲು ಸಾಧ್ಯವೇ..? ಒಮ್ಮೆ ಯೋಚಿಸಿ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಶೇಕಡಾ 10 ರಷ್ಟು ವೇತನ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಇತರೆ ಬೇಡಿಕೆಗಳನ್ನೂ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಮ್ಮ ಸರ್ಕಾರ ತಮ್ಮ ಬೇಡಿಕೆಗಳಿಗೆ ಹಂತ-ಹಂತವಾಗಿ ನಿಶ್ಚಯವಾಗಿಯೂ ಸ್ಪಂದಿಸುತ್ತದೆ. ತಾವು ನನ್ನ ಈ ಕರೆಗೆ ಓಗೊಟ್ಟು, ಮುಷ್ಕರವನ್ನು ಹಿಂಪಡೆದು ಸಾರ್ವಜನಿಕರ ಸೇವೆಗೆ ಎಂದಿನಂತೆ ಅಣಿಯಾಗುವಿರಿ. ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗುವಿರಿ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.