ಜಮ್ಮು-ಕಾಶ್ಮೀರ : ಉಗ್ರರನ್ನು ಹೊಗಳಿ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಸ್ಪಷ್ಟಪಡಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ನಡೆಯಲು ಭಾರತದ ಸಂವಿಧಾನ ಅವಕಾಶ ನೀಡಿದೆ. ಈ ವಿಷಯವನ್ನು ಪಾಕಿಸ್ತಾನವೂ ಅರ್ಥಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾನು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿರುತ್ತೇನೆ. ಆದರೆ ಮಾಧ್ಯಮ ಮಾತ್ರ ನನ್ನ ಹೇಳಿಕೆಯನ್ನು ದೊಡ್ಡದು ಮಾಡುತ್ತಿವೆ ಎಂದು ಮುಫ್ತಿ ಮೊಹಮದ್ ಆರೋಪಿಸಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಧನಾತ್ಮಕ ವಿಷಯಗಳನ್ನು ಪರಿಗಣಿಸದೇ ನಕಾರಾತ್ಮಕ ವಿಷಯಗಳನ್ನು ಮಾತ್ರ ಹೆಚ್ಚು ತೋರಿಸಲಾಗಿದೆ ಎಂದು ಮುಫ್ತಿ ಮೊಹಮದ್ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.
2014ರ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಣಿವೆ ರಾಜ್ಯದಲ್ಲಿ ಐದು ಹಂತಗಳಲ್ಲಿ ಚುನಾವಣೆ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಪಾಕಿಸ್ತಾನ, ಹುರಿಯತ್ ಕಾನ್ಫರೆನ್ಸ್ ಹಾಗೂ ಉಗ್ರಗಾಮಿ ಸಂಘಟನೆಗಳ ಅನುಕೂಲಕರ ವಾತಾವರಣವೇ ಕಾರಣ ಎಂದು ಜಮ್ಮು-ಕಾಶ್ಮೀರದ ನೂತನ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಂಸತ್ ನಲ್ಲೂ ಗದ್ದಲ ಉಂಟಾಗಿ ಪಿಡಿಪಿ ಮಿತ್ರ ಪಕ್ಷ ಬಿಜೆಪಿಯೂ ಸೇರಿದಂತೆ ಎಲ್ಲಾ ಪಕ್ಷಗಳು ಮುಫ್ತಿ ಮೊಹಮದ್ ಹೇಳಿಕೆಯನ್ನು ಖಂಡಿಸಿದ್ದವು.