ವಾಷಿಂಗ್ಟನ್ : ವಿಶ್ವದ ಅತಿ ದೊಡ್ಡ ಮತ್ತು ಅತಿ ಹಳೆಯ ಪ್ರಜಾಪ್ರಭುತ್ವ ನಮ್ಮನ್ನಿಂದು ಮತ್ತಷ್ಟು ಸನಿಹಕ್ಕೆ ಕರೆತಂದಿದೆ ಎಂದು ಪ್ರಧಾನಿ ನರೆಂದ್ರ ಮೋದಿ ಹೆಳಿದ್ದಾರೆ.
ಅಮೆರಿಕ ಕಾಂಗ್ರೆಸ್ (ಸಂಸತ್)ನಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭಾಷಣ ಮಾಡಿದರು. ಭಾಷಣದ ಉದ್ದಕ್ಕೂ ಸಂಸತ್ ಸದಸ್ಯರು ಚಪ್ಪಾಳೆಯ ಸುರಿಮಳೆಯನ್ನೇಗೈದರು. ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಎರಡೂ ದೇಶಗಳ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದೆ. ನಾಯಕರು ಕಂಡ ಕನಸನ್ನು ನಾವು ನನಸಾಗಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಉಭಯದೇಶಗಳ ನಡುವೆ ಸೇತುವೆಯಾಗಿದೆ. ಅನಿವಾಸಿ ಭಾರತೀಯರು ಇದನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ ಎಂದರು.
ಒಳ್ಳೆಯ ಉಗ್ರವಾದ, ಕೆಟ್ಟ ಉಗ್ರವಾದ ಎಂಬುದಿಲ್ಲ. ನಮ್ಮ ನೆರೆಯಲ್ಲೇ ಉಗ್ರವಾದದ ಪೋಷಣೆ ನಡೆಯುತ್ತಿದೆ. ಮಾನವತೆ ನಂಬುವವರು ಇದರ ನಿಗ್ರಹಕ್ಕೆ ಒಂದಾಗಬೇಕು ಎಂದು ಕರೆ ನೀಡಿದರು.
21ನೇ ಶತಮಾನ ವ್ಯಾಪಕ ಅವಕಾಶ ತೆರೆಯುವುದರೊಂದಿಗೆ ಭಯೋತ್ಪಾದನೆಯಂತಹ ಗಂಭೀರ ಸವಾಲುಗಳನ್ನೂ ಒಡ್ಡಿದೆ ಎಂದರು. ಮುಂಬಯಿ ದಾಳಿ ವೇಳೆ ಬೆಂಬಲವಾಗಿದ್ದಕ್ಕೆ ಪ್ರಧಾನಿ ಮೋದಿ ಕಾಂಗ್ರೆಸ್ಗೆ ಧನ್ಯವಾದವನ್ನೂ ಸಮರ್ಪಿಸಿದರು. ಭಯೋತ್ಪಾದನೆ ವಿರುದ್ಧ ಒಂದೇ ದನಿಯಿಂದ ಒಟ್ಟಾಗಿ ಹೋರಾಟ ನಡೆಸಬೇಕಿದೆ. ಧರ್ಮದಿಂದ ಭಯೋತ್ಪಾದನೆಯನ್ನು ಪ್ರತ್ಯೇಕಗೊಳಿಸಬೇಕಿದೆ ಎಂದರು. ಅಲ್ಲದೇ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆ ಬೆಂಬಲಿಸುವವರಿಗೆ ಪಾಠ ಕಲಿಸಬೇಕಿದೆ ಎಂದರು.
ಅಮೆರಿಕ ಸಂಸತ್ನಲ್ಲಿ ಮಾತನಾಡುವ ಅವಕಾಶ ನೀಡುವ ಮೂಲಕ ಭಾರತದ 120 ಕೋಟಿ ಜನರನ್ನು ಅಮೆರಿಕ ಗೌರವಿಸಿದೆ. ಅಮೆರಿಕ ಸಂಸತ್ ಪ್ರಜಾಪ್ರಭುತ್ವದ ದೇಗುಲ ಇದ್ದಂತೆ. ಇತರ ದೇಶಗಳ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲೂ ಅಮೆರಿಕ ಸಂಸತ್ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಅಮೆರಿಕವು ವೀರರ ಭೂಮಿ. ಇವರ ತ್ಯಾಗವನ್ನು ಭಾರತ ಸ್ಮರಿಸುತ್ತದೆ. ಅನೇಕರು ಭಾರತವು ಸ್ವತಂತ್ರಗೊಂಡಾಗ ಅದರ ಯಶಸ್ಸಿನ ಬಗ್ಗೆ ಅನುಮಾನಿಸಿದ್ದರು. ಆದರೆ ಪ್ರಜಾಪ್ರಭುತ್ವದ ನಂಬಿಕೆಯ ಮೂಲಕ ನಾವದಕ್ಕೆ ಪ್ರತಿಕ್ರಿಯಿಸಿದೆವು. ಭಾರತದ ನೆರೆಯಲ್ಲೇ ಉಗ್ರವಾದವು ಬೆಳೆಯುತ್ತಿದೆ. ರಾಜಕೀಯ ಲಾಭಕ್ಕಾಗಿ ಉಗ್ರವಾದ ಪ್ರೇರೇಪಿಸುತ್ತಿರುವವರಿಗೆ ಅಮೆರಿಕ ತಕ್ಕ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.
ಯೋಗದ ಮೂಲಕ ಎರಡೂ ದೇಶಗಳ ಮಧ್ಯೆ ವಿಶಿಷ್ಟ ಸಂಪರ್ಕ ಸೇತುವೆ ನಿರ್ಮಾಣವಾಗಿದೆ. ಇದರೊಂದಿಗೆ ಅನಿವಾಸಿ ಭಾರತೀಯರಾದ ವಿವಿಧ ಕಂಪನಿ ಸಿಇಒಗಳು, ಶಿಕ್ಷಣ ಸಂಸ್ಥೆಗಳು, ವಿಜ್ಞಾನಿಗಳು, ಆರ್ಥಿಕ ತಜ್ಞರು, ವೈದ್ಯರು ಸ್ಪೆಲ್ಲಿಂಗ್ ಬೀ ಚಾಂಪಿಯನ್ನರು ನಮ್ಮ ನಡುವೆ ಸೇತುವೆ ಸ್ಥಾಪಿಸಿದ್ದಾರೆ ಎಂದು ಹೇಳಿದರು.