ಬೆಂಗಳೂರು : ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಹಿರಿಯ ವಕೀಲರಾದ ದೊರೆರಾಜು ಹಾಗೂ ನಟರಾಜ್ ಶರ್ಮ ಅವರ ಮೂಲಕ, ನ್ಯಾ.ಕೆಂಪಣ್ಣ ನೇತೃತ್ವದ ವಿಚಾರಣಾ ಆಯೋಗಕ್ಕೆ 810 ಪುಟಗಳ ದಾಖಲೆಗಳನ್ನು ಸಲ್ಲಿಸಿದೆ.
ಕೆಂಪಣ್ಣ ಆಯೋಗದ ಕಾರ್ಯದರ್ಶಿ ಎಸ್.ಶ್ರೀವತ್ಸ ಕೆದಿಲಾಯ ಅವರಿಗೆ ದೊರೆರಾಜು ಮತ್ತು ನಟರಾಜ್ ಶರ್ಮ ದಾಖಲೆಗಳನ್ನು ಸಲ್ಲಿಕೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೊರೆರಾಜು, ಅರ್ಕಾವತಿ ಡಿನೋಟಿಫಿಕೇಷನ್
ಪ್ರಕರಣದ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಅಧಿಕೃತವಾಗಿ ಆಯೋಗಕ್ಕೆ ಸಲ್ಲಿಸಿದ್ದೇವೆ. ಆಯೋಗಕ್ಕೆ ದೂರು ಸಲ್ಲಿಸುವ ಅವಧಿ ಮುಗಿದಿರುವುದರಿಂದ ಈಗ ದಾಖಲೆ ಸಲ್ಲಿಸಿದ್ದೇವೆ ಎಂದರು.
ದಾಖಲೆ ಸಂಗ್ರಹಕ್ಕೆ ಅಡೆತಡೆಯುಂಟಾಗಿ ಕಾಲಾವಕಾಶ ಬೇಕಾದ ಹಿನ್ನೆಲೆಯಲ್ಲಿ ದಾಖಲಾತಿ ಸಲ್ಲಿಕೆ ಕಾರ್ಯ ವಿಳಂಬವಾಯಿತು ಎಂದರು.
ನಟರಾಜ್ ಶರ್ಮ ಮಾತನಾಡಿ,ನಾವು ಸಲ್ಲಿಸಿರುವ ದಾಖಲೆಗಳೇ ಡಿನೋಟಿಫಿಕೇಷನ್ ಪ್ರಕರಣದ ಹಗರಣವನ್ನು ದೃಢಪಡಿಸುತ್ತವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಬಂದಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಲಾಗಿತ್ತು. ಈ ಸಂಬಂಧ ರಾಜ್ಯಪಾಲರ ಭೇಟಿಗೆ ಸಮಯ ಕೋರಲಾಗಿತ್ತು. ಆದರೆ ಇದುವರೆಗೂ ಸಮಯ ಸಿಕ್ಕಿಲ್ಲ. ರಾಜ್ಯಪಾಲರಿಂದಲೂ ಭೇಟಿಗೆ ಸಮಯ ಸಿಗುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಧನಂಜಯ್ಯರವರು ತಮ್ಮ ಮೇಲೆ ಮಿಥ್ಯ ಆರೋಪ ಮಾಡಿರುವುದು ಸರಿಯಲ್ಲ. ತಾವು ಅರ್ಕಾವತಿ ಡಾಟ್ ಕಾಮ್ ಆರಂಭಿಸಿರುವುದು ಸ್ವಾರ್ಥಕ್ಕಾಗಿ ಅಲ್ಲ. ಈ ಡಾಟ್ ಕಾಮ್ ಅಕ್ರಮವಾಗಿದ್ದರೆ ತಮ್ಮನ್ನು ವಿಧಾನಸೌಧ ಮುಂದಿರುವ ಅಂಬೇಡ್ಕರ್ ಪ್ರತಿಮೆ ಬಳಿ ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದರು.
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ದಾಖಲೆ ನೀಡಲು ಅನುಕೂಲವಾಗುವಂತೆ ಡಾಟ್ ಕಾಮ್ ಸ್ಥಾಪಿಸಿದ್ದಾಗಿ ಅವರು ಸಮರ್ಥಿಸಿಕೊಂಡರು.