ಚೆನ್ನೈ : ನಮ್ಮ ಪಕ್ಷ ತಮಿಳು ಸಮಾಜದ ಸೇವೆಗಾಗಿ ಜನ್ಮ ತಳೆದದ್ದು ಹೊರತು ಅಧಿಕಾರಕ್ಕಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಆಸೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅವರು, ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಯಾವುದೇ ಬಯಕೆ ಇಲ್ಲ ಎಂದು ಎಂದಿದ್ದಾರೆ.
ಈಗ ತಮ್ಮ ಚಿತ್ತ ಇರುವುದು ಪಕ್ಷವನ್ನು ರಕ್ಷಿಸಿಕೊಳ್ಳುವುದರ ಬಗ್ಗೆ ಎಂದಿರುವ ಅವರು ಜನರಿಗೆ ಸೇವೆ ಮಾಡುವ ಚಳವಳಿಯನ್ನು ಮುಂದುವರೆಸಿಕೊಂಡು ಹೋಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಸಿ.ಎನ್.ಅಣ್ಣಾದೊರೈ ಸ್ಥಾಪಿಸಿದ ಡಿಎಂಕೆ ಪಕ್ಷ ತಮಿಳು ಜನರ ದ್ರಾವಿಡ ಅಸ್ಮಿತೆಗಾಗಿ ಹೋರಾಡಿದ ಪಕ್ಷ. ಅಣ್ಣಾದೊರೈ ಮತ್ತು ಪೆರಿಯರ್ ಎಂದೇ ಹೆಸರುವಾಸಿಯಾದ ಇ.ವಿ.ರಾಮಸ್ವಾಮಿಯವರ ಆತ್ಮಾಭಿಮಾನದ ತತ್ವಗಳನ್ನು ಪಾಲಿಸುವಂತೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ.