ಚೆನ್ನೈ : ತಮಿಳುನಾಡು ಬಂದ್ ಹಿನ್ನಲೆಯಲ್ಲಿ ತಿರುಚಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಂಡಿಎಂಕೆ ಮುಖ್ಯಸ್ಥ ವೈಕೋ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಕೆಲವೆಡೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಚೆನ್ನೈನ ಹಲವೆಡೆ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪ್ರತಿಭಟನೆಗಳು ಜೋರಾಗತೊಡಗಿವೆ. ಈ ನಡುವೆ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಹಾಗೂ ಅವರ ಬೆಂಬಲಿಗರು ಎಗ್ಮೋರ್ ರೈಲು ನಿಲ್ದಾಣದಲ್ಲಿ ರ್ಯಾಲಿ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ವಶಕ್ಕೆ ಒಪಡೆದುಕೊಂಡಿದ್ದಾರೆ.
ಮಾಜಿ ಸಚಿವ ಡಿಎಂಕೆಯ ತಿರುವನ್ನಾಮಲೈ ಇ.ವಿ ವೇಲು ಸೇರಿದಂತೆ ಹಲವರು ಚೆನ್ನೈನ ಪ್ರಧಾನ ಅಂಚೆ ಕಛೆರಿ ಎದುರು ಪ್ರತಿಭಟನೆ ನಡೆಸಿದರು. ಸಿಂಗನಲ್ಲೂರಿನಲ್ಲಿ ಡಿಎಂಕೆ ಶಾಸಕ ಕಾರ್ತಿಕ್ ನೇತೃತ್ವದಲ್ಲಿ ರೈಲು ತಡೆಗೆ ಯತ್ನ ನಡೆಸಲಾಯಿತು.
ವೆಲ್ಲೂರಿನ ಕಟ್ಪಾಡಿಯ ಬೇಕರಿಗೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ. ಕೊಯಂಬತ್ತೂರಿನ ದಕ್ಷಿಣ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ತಮಿಳುನಾಡು ವರ್ತಕ ಸಂಘಟನೆಯ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.