ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದ ಮಟ್ಟಿಗೆ ಇದೊಂದು ನಿರಾಶಾದಾಯಕ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಚ್ಚಾ ತೈಲ ಬೆಲೆ ಇಳಿಕೆಯಿಂದ ಕೇಂದ್ರಕ್ಕೆ 18-20 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ. ಇದನ್ನು ರೈಲ್ವೆ ಬಜೆಟ್ ನಲ್ಲಿ ಉಪಯೋಗಿಸಿಕೊಳ್ಳಲು ಅವಕಾಶವಿದ್ದರೂ ಸುರೇಶ್ ಪ್ರಭು ಅವರು ಆ ಕೆಲಸ ಮಾಡಿಲ್ಲ, ಅಲ್ಲದೇ ದೇಶದ ಯಾವುದೇ ಭಾಗಕ್ಕೂ ಹೊಸ ರೈಲು ಮಾರ್ಗ ಘೋಷಣೆ ಮಾಡಿಲ್ಲ ಎಂದು ಸಿ.ಎಂ ಆಕ್ಷೇಪಿಸಿದ್ದಾರೆ.
ಮೈಸೂರು-ಬಳ್ಳಾರಿ ಹೈಸ್ಪೀಡ್ ರೈಲು ಹಾಗೂ ಗದಗ-ವಾಡಿ ಹೊಸ ರೈಲು ಮಾರ್ಗಕ್ಕಾಗಿ ಮನವಿ ಮಾಡಲಾಗಿತ್ತು. ರಾಜ್ಯದ ಎರಡೂ ಬೆಡಿಕೆಗಳಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸುರೇಶ್ ಪ್ರಭು ಹಳಿ ಇಲ್ಲದ ರೈಲು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ರೈಲ್ವೆ ಸಚಿವರು ಏನು ಮಾಡಲಿದ್ದಾರೆ ಎಂಬುದನ್ನು ಕಾದು ನೋಡೋಣ ಎಂದು ಸಿ.ಎಂ ತಿಳಿಸಿದ್ದಾರೆ.
ಸಿ.ಎಂ ಕೇಂದ್ರ ರೈಲ್ವೆ ಬಜೆಟ್ ನ್ನು ನಿರಾಶಾದಾಯಕ ಬಜೆಟ್ ಎಂದು ಹೇಳಿದ್ದರೆ. ಮಾಜಿ ಸಿ.ಎಂ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿರುವ ರೈಲ್ವೆ ಬಜೆಟ್ ಪ್ರಯಾಣಿಕ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ.