ನವದೆಹಲಿ : ಫೆ.26ರಂದು, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಸ್ಮೃತಿ ದಿನ(ಪುಣ್ಯ ಸ್ಮರಣೆ)ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು ಗೌರವ ಅರ್ಪಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್, ಹಲವರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದ್ದರು, ಅವರ ಪುಣ್ಯ ಸ್ಮರಣೆ ದಿನದಂದು ವೀರ ಸಾವರ್ಕರ್ ಗೆ ನಮನ ಸಲ್ಲಿಸುವುದಾಗಿ ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದೇ ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ತಾವು ವೀರ ಸಾವರ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಚಿತ್ರವನ್ನು ಅಪ್ ಲೋಡ್ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಎಂದೇ ಖ್ಯಾತರಾಗಿರುವ ಸಾವರ್ಕರ್ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕರೂ ಆಗಿದ್ದರು. ಹಿಂದುತ್ವದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸಾವರ್ಕರ್ ಅವರ ಪುಣ್ಯ ಸ್ಮರಣೆಯ ದಿನವಾಗಿದ್ದು, ದೇಶಾದ್ಯಂತ ಇರುವ ವಿವಿಧ ಸಂಘ ಸಂಸ್ಥೆಗಳು ವೀರ ಸಾವರ್ಕರ್ ಅವರ ಸ್ಮೃತಿ ದಿನ ಆಚರಿಸುತ್ತಿವೆ.