ಬ್ರಸೆಲ್ಸ್ : ಪ್ರಧಾನಿ ನರೇಂದ್ರ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸ ಆರಂಭವಾಗಿದ್ದು, ಕಳೆದ ವಾರ ಭೀಕರ ಉಗ್ರರ ದಾಳಿಗೆ ತುತ್ತಾದ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನ ಮೆಲ್ಬೀಕ್ ಮೆಟ್ರೊ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮಾರಕಕ್ಕೆ ಪುಷ್ಪ ಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಇನ್ ಫೋಸಿಸ್ ಟೆಕ್ಕಿ ರಾಘವೇಂದ್ರನ್ ಗಣೇಶನ್ ಅವರನ್ನೂ ಸ್ಮರಿಸಿಕೊಂಡ ಪ್ರಧಾನಿ ಮೋದಿ, ಅವರಿಗೂ ಶ್ರದ್ಧಾಂಜಲಿ ಅರ್ಪಿಸಿದರು. ಉಗ್ರರ ದಾಳಿಗೊಳಗಾಗಿರುವ ಬೆಲ್ಜಿಯಂ ಎದುರಿಸುತ್ತಿರುವ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಅದರ ಜತೆಗಿದೆ ಎಂದು ಮೋದಿ ತಿಳಿಸಿದ್ದಾರೆ.
ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ, ಭಾರತ ಯರೋಪ್ ನ ಪ್ರಮುಖ ಭಾಗೀದಾರ ದೇಶವಾಗಿರುವ ಬೆಲ್ಜಿಯಂ ಜತೆಗೂಡಿ ಆರ್ಥಿಕಾಭಿವೃದ್ಧಿಗೆ ದುಡಿಯಲು ಬಯಸಿದೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಮೋದಿ ಅವರು ಎಗ್ ಮಾಂಟ್ ಪ್ಯಾಲೇಸ್ನಲ್ಲಿ ಪರೇಡ್ ವೀಕ್ಷಿಸಿ ಗೌರವ ಸ್ವೀಕರಿಸಿದರು.