ನವದೆಹಲಿ : ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ, ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ವಿದ್ಯುತ್ ಶುಲ್ಕ ಕಡಿತ ಹಾಗೂ ಉಚಿತ ಕುಡಿಯುವ ನೀರು ಪೂರೈಕೆ ಸಂಬಂಧ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ.
400 ಯೂನಿಟ್ ವರೆಗೆ ಬಳಸಲಾಗುವ ವಿದ್ಯುತ್ತಿಗೆ ಇನ್ನು ಮುಂದೆ ದೆಹಲಿ ಜನರು ಸದ್ಯ ಪಾವತಿಸುತ್ತಿರುವ ಶುಲ್ಕದ ಅರ್ಧದಷ್ಟು ಹಣ ಕಟ್ಟಿದರೆ ಸಾಕು. ಏಕೆಂದರೆ ವಿದ್ಯುತ್ ಶುಲ್ಕದ ಒಟ್ಟು ಮೊತ್ತದಲ್ಲಿ ಶೇ.50ರಷ್ಟು ಸಬ್ಸಿಡಿ ಲಭಿಸಲಿದೆ. ಹಾಗೆಯೇ 20 ಸಾವಿರ ಲೀಟರ್ ವರೆಗೆ ಕುಡಿಯುವ ನೀರು ಉಚಿತ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಎರಡು ತೀರ್ಮಾನಗಳಿಗೆ ಕೆಲ ಷರತ್ತುಗಳೂ ಇವೆ. ವಿದ್ಯುತ್ ಬಳಕೆ ಮಿತಿ 400 ಯೂನಿಟ್ ವ್ಯಾಪ್ತಿ ಮೀರಿದರೆ ಅಂತಹ ಗ್ರಾಹಕರಿಗೆ ಯಾವುದೇ ರೀತಿಯ ದರ ಇಳಿಕೆ ಅನ್ವಯವಾಗುವುದಿಲ್ಲ. ಅವರು 400 ಯೂನಿಟ್ ಹಾಗೂ ಹೆಚ್ಚುವರಿ ಬಳಕೆಗೂ ಪೂರ್ತಿ ಹಣ ಕಟ್ಟಬೇಕಾಗುತ್ತದೆ. ಅದೇ ರೀತಿ 20 ಸಾವಿರ ಲೀಟರ್ಗಿಂತ ಅಧಿಕ ನೀರು ಬಳಸಿದರೆ ಅಷ್ಟೂ ನೀರಿಗೆ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದು ಮಾ.1ರಿಂದ ಜಾರಿಗೆ ಬರಲಿದೆ.
ವಿದ್ಯುತ್ ದರ ಕಡಿತ ಹಾಗೂ ಉಚಿತ ನೀರು ಪೂರೈಕೆ ತೀರ್ಮಾನಗಳಿಂದ ದೆಹಲಿ ಸರ್ಕಾರದ ಬೊಕ್ಕಸಕ್ಕೆ 1670 ಕೋಟಿ ರೂ. ಹೊರೆಯಾಗಲಿದೆ. ವಿದ್ಯುತ್ ದರ ಸಬ್ಸಿಡಿಯಿಂದಾಗಿ ದೆಹಲಿಯ 36 ಲಕ್ಷ ಗ್ರಾಹಕರು ಅಥವಾ ಶೇ.90ರಷ್ಟು ದೆಹಲಿ ನಿವಾಸಿಗಳಿಗೆ ಉಪಯೋಗವಾಗಲಿದೆ. 20 ಸಾವಿರ ಲೀಟರ್ ನಷ್ಟು ಉಚಿತ ನೀರು ಪೂರೈಕೆಯಿಂದ 18 ಲಕ್ಷ ಕುಟುಂಬಗಳು ಅನುಕೂಲ ಪಡೆಯಲಿವೆ ಎಂದು ವಿವರಿಸಿದರು ಎಂದು ಸಿಸೋಡಿಯಾ ವಿವರಿಸಿದ್ದಾರೆ.