ಅಯೋಧ್ಯೆ : 'ರಾಮ ಜನ್ಮಭೂಮಿ' ವಿವಾದವನ್ನು ಇತ್ಯರ್ಥಗೊಳಿಸಲು ವಿಶ್ವಹಿಂದೂ ಪರಿಷತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಡುವು ವಿಧಿಸಿದ್ದು, ಮೇ ತಿಂಗಳೊಳಗಾಗಿ ವಿವಾದ ಇತ್ಯರ್ಥಗೊಳಿಸುವಂತೆ ಒತ್ತಡ ಹೇರಿದೆ.
ಒಂದು ವೇಳೆ ಮೇ ತಿಂಗಳೊಳಗಾಗಿ ರಾಮ ಜನ್ಮಭೂಮಿ ವಿವಾದವನ್ನು ಇತ್ಯರ್ಥಗೊಳಿಸದೇ ಇದ್ದಲ್ಲಿ, ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಬೃಹತ್ ಆಂದೋಳನ ಕೈಗೊಳ್ಳುವುದಾಗಿ ವಿ.ಹೆಚ್.ಪಿ ಎಚ್ಚರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿ.ಹೆಚ್.ಪಿ ಮುಖಂಡ ಶರತ್ ಶರ್ಮಾ, ರಾಮ ಮಂದಿರ ವಿಷಯವನ್ನು ಕ್ಷುಲ್ಲಕಗೊಳಿಸುವುದನ್ನು ವಿ.ಹೆಚ್.ಪಿ ಸಹಿಸುವುದಿಲ್ಲ. ಅಯೋಧ್ಯೆಯ ರಾಮಜನ್ಮಭೂಮಿ ಇರುವ 70 ಎಕರೆಗಳಷ್ಟು ಜಾಗವೂ ನಮಗೇ ಸೇರಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ವಿ.ಹೆಚ್.ಪಿ ಮುಖಂಡರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಪಡೆದೇ ಇರುವ ಸ್ಥಳೀಯ ಜನರು ರಾಮ ಜನ್ಮಭೂಮಿ ವಿವಾದದಲ್ಲಿ ಮಧ್ಯ ಪ್ರವೇಶ ಮಾಡುತ್ತಿದ್ದಾರೆ ಎಂದು ವಿ.ಹೆಚ್.ಪಿ ಆರೋಪಿಸಿದ್ದು, ಹಶೀಮ್ ಅನ್ಸಾರಿ ಹಾಗೂ ಮಹಾಂತ್ ಗ್ಯಾನ್ ದಾಸ್ ಅವರುಗಳು ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದಿರುವುದನ್ನು ವಿರೋಧಿಸಿದೆ.
ವಿವಾದಿತ ಭೂಮಿಯಲ್ಲಿ, ಮಸೀದಿ ಹಾಗೂ ಮಂದಿರ ಎರಡನ್ನೂ ನಿರ್ಮಿಸುವ ಬಗ್ಗೆ ಹಿಂದೂ ಮುಸ್ಲಿಮ್ ನಾಯಕರ ಮಾತುಕತೆ ವೇಳೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಎರಡೂ ಕಟ್ಟಡಗಳನ್ನು ವಿಭಜಿಸುವಂತೆ 100 ಅಡಿ ಎತ್ತರದ ಗೋಡೆ ನಿರ್ಮಾಣಕ್ಕೂ ತೀರ್ಮಾನಿಸಲಾಗಿದೆ. ಆದರೆ ಇದಕ್ಕೆ ವಿಶ್ವಹಿಂದೂ ಪರಿಷತ್ ತೀವ್ರ ವಿರೋಧ ವ್ಯಕ್ತಪಡಿಸಿದೆ.