ಅಯೋಧ್ಯೆ : 'ಬಾಬ್ರಿ ಮಸೀದಿ'ಹಾಗೂ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿವಾದವನ್ನು ನ್ಯಾಯಲಯದ ಹೊರಗೆ ಇತ್ಯರ್ಥಗೊಳಿಸಲು ಉಭಯ ಧರ್ಮದ ಮುಖಂಡರೂ ಚಿಂತನೆ ನಡೆಸಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಅಖಾರ ಪರಿಷತ್ ನ ಮುಖ್ಯಸ್ಥ ಹಶೀಮ್ ಅನ್ಸಾರಿ, ಹನುಮಾನ್ ಗರ್ಹಿಯ ಮುಖ್ಯಸ್ಥ ಮಹಾಂತ್ ಗ್ಯಾನ್ ದಾಸ್ ಅವರನ್ನು ಭೇಟಿ ಮಾಡಿದ್ದು ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಗೊಳಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಉಭಯ ಧರ್ಮದ ನಾಯಕರುಗಳು ವಿವಾದದ ಸಂಬಂಧ ಅಂತಿಮ ನಿರ್ಧಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ವಿವಾದಿತ ಭೂಮಿಯಲ್ಲಿ, ಮಸೀದಿ ಹಾಗೂ ಮಂದಿರ ಎರಡನ್ನೂ ನಿರ್ಮಿಸುವ ಬಗ್ಗೆ ಹಿಂದೂ ಮುಸ್ಲಿಮ್ ನಾಯಕರ ಮಾತುಕತೆ ವೇಳೆ ಪ್ರಸ್ತಾಪಿಸಲಾಗಿದೆ. ಎರಡೂ ಕಟ್ಟಡಗಳನ್ನು ವಿಭಜಿಸುವಂತೆ 100 ಅಡಿ ಎತ್ತರದ ಗೋಡೆ ನಿರ್ಮಾಣಕ್ಕೂ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಅಂತಿಮ ಹಂತದ ಈ ಮಾತುಕತೆಯಲ್ಲಿ ಹಶೀಮ್ ಅನ್ಸಾರಿ ವಿಶ್ವಹಿಂದೂ ಪರಿಷತ್ ಸಂಘಟನೆಯನ್ನು ದೂರವಿಟ್ಟಿದ್ದಾರೆ. ರಾಮಮಂದಿರ ನಿರ್ಮಾಣ ವಿಶ್ವಹಿಂದೂ ಪರಿಷತ್ ನ ಮುಖ್ಯ ಉದ್ದೇಶವಲ್ಲ. ಆದರೆ ಕೋಮುಗಲಭೆ ಸೃಷ್ಠಿಸುವುದೇ ಅದರ ಧ್ಯೇಯ ಹಾಗಾಗಿ ಮಾತುಕತೆಯಲ್ಲಿ ವಿ.ಹೆಚ್.ಪಿ ಸಂಘಟನೆಯನ್ನು ಸೇರಿಸಿಕೊಂಡಿಲ್ಲ ಎಂದು ಅನ್ಸಾರಿ ತಿಳಿಸಿದ್ದಾರೆ.
ಅಂತಿಮ ನಿರ್ಧಾರದ ಬಳಿಕ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಾಗಿ ಅನ್ಸಾರಿ ಹೇಳಿದ್ದಾರೆ.