ಮುಂಬೈ : ಉದ್ಯಮಿ ಪ್ರದೀಪ್ ಜೈನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಗಡೀಪಾರು ಮಾಡಲ್ಪಟ್ಟಿರುವ ಭೂಗತ ಪಾತಕಿ ಅಬು ಸಲೇಂಗೆ ಮುಂಬೈ ವಿಶೇಷ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
1995ರಲ್ಲಿ ನಡೆದಿದ್ದ ಸ್ಥಳೀಯ ಬಿಲ್ಡರ್ ಪ್ರದೀಪ್ ಜೈನ್ ಕೊಲೆ ಪ್ರಕರಣದಲ್ಲಿ ಅಬು ಸಲೇಂ ಮತ್ತು ಇನ್ನಿಬ್ಬರನ್ನು ಅಪರಾಧಿಗಳೆಂದು ಪರಿಗಣಿಸಿ ವಿಶೇಷ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
2005ರಲ್ಲಿ ಭಾರತಕ್ಕೆ ಗಡೀಪಾರಾಗಿರುವ ಅಬು ಸಲೇಂ ವಿರುದ್ಧ ಭಾರತದಲ್ಲಿ ನಡೆದಿರುವ ಅಪರಾಧಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಪರಿಗಣಿಸಿ ಶಿಕ್ಷೆಗೊಳಗಾಗಿರುವುದು ಇದೇ ಮೊದಲ ಪ್ರಕರಣವಾಗಿದೆ.
ಅಬು ಸಲೇಂನನ್ನು ಐಪಿಸಿ ಸೆಕ್ಷನ್ 32 (ಕೊಲೆ) ಹಾಗೂ ಸೆಕ್ಷನ್ 120 (ಕ್ರಿಮಿನಲ್ ಸಂಚು) ಮತ್ತು ಟಾಡಾ ಕಾಯಿದೆಯ ವಿವಿಧ ಸೆಕ್ಷನ್ ಗಳ ಪ್ರಕಾರ ಅಪರಾಧಿ ಎಂದು ಪರಿಗಣಿಸಲಾಗಿತ್ತು.
ಪ್ರಕರಣಕೆ ಸಂಬಂಧಿಸಿದಂತೆ ಇನ್ನಿಬ್ಬರು ಅಪರಾಧಿಗಳೆಂದರೆ ವೀರೇಂದ್ರ ಝಾಂಬ್ ಮತ್ತು ಮೆಹೆಂದಿ ಹಸನ್. ಫೆಬ್ರವರಿ 16 ರಂದು ಟಾಡಾ ನ್ಯಾಯಾಲಯವು ಪ್ರಕರಣದ ತೀರ್ಪನ್ನು ಕಾದಿರಿಸಿತ್ತು.
1995ರ ಮಾರ್ಚ್ 7ರಂದು ಬಿಲ್ಡರ್ ಪ್ರದೀಪ್ ಜೈನ್ ಅವರನ್ನು ಜುಹುದಲ್ಲಿನ ಅವರ ಬಂಗ್ಲೆಯ ಹೊರಗೆ ಹಂತಕರು ಗುಂಡಿಟ್ಟು ಕೊಂದಿದ್ದರು. ಜೈನ್ ಅವರು ತಮ್ಮ ಆಸ್ತಿಯ ಬಹುಪಾಲನ್ನು ಅಬು ಸಲೇಂ ಗೆ ಬಿಟ್ಟುಕೊಡಬೇಕೆಂಬುದು ಹಂತಕರ ಬೇಡಿಕೆಯಾಗಿತ್ತು. ಜೈನ್ ಅದಕ್ಕೆ ಒಪ್ಪಿರಲಿಲ್ಲ.