ನವದೆಹಲಿ : ವಿವಾದಾತ್ಮಕ ಭೂಸ್ವಾಧೀನ ಮಸೂದೆ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸುತ್ತಿರುವ ಹಿರಿಯ ಸಮಾಜಸೇವಕ, ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಾಥ್ ನೀಡಿದ್ದಾರೆ.
ಕೇಜ್ರಿವಾಲ್ ತಮ್ಮ 66 ಶಾಸಕರೊಡಗೂಡಿ ಅಣ್ಣಾ ರಜಾರೆ ನಡೆಸುತ್ತಿರುವ ಆಂದೋಲನವನ್ನು ಸೇರಿಕೊಂಡಿದ್ದಾರೆ. ಅಣ್ಣಾ ಹಜಾರೆ ಅವರು ಈ ಮೊದಲು ಮೋದಿ ಸರಕಾರದ ಭೂಸ್ವಾದೀನ ಮಸೂದೆ ವಿರುದ್ಧದ ತನ್ನ ಆಂದೋಲನದಲ್ಲಿ ಕೇಜ್ರಿವಾಲ್ ಸೇರಿಕೊಳ್ಳುವುದಾದರೆ ಅವರನ್ನು ಸ್ವಾಗತಿಸುತ್ತೇನೆ, ಆದರೆ ಅವರು ನನ್ನೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವಂತಿಲ್ಲ ಎಂದಿದ್ದರು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಕೇಜ್ರಿವಾಲ್ ಅವರನ್ನು ವೇದಿಕೆಗೆ ಸ್ವಾಗತಿಸುವ ಮೂಲಕ ಅಣ್ಣಾ ತಮ್ಮ ಆಂದೋಲನಕ್ಕೆ ಇದೇ ಮೊದಲ ಬಾರಿ ಎಂಬಂತೆ ರಾಜಕೀಯ ತಿರುವು ನೀಡಿದರು.
ಅರವಿಂದ್ ಕೇಜ್ರಿವಾಲ್ ಅವರೀಗ ಮುಖ್ಯಮಂತ್ರಿ, ಇತರ ಯಾವುದೇ ಸಾಮಾನ್ಯ ಪ್ರಜೆಯಂತೆ ಅವರನ್ನು ಕಾಣಲಾಗದು ಎಂದ ಅಣ್ಣಾ ಹಜಾರೆ, ಒಂದೊಮ್ಮೆ ಇತರ ಮುಖ್ಯಮಂತ್ರಿಗಳು ನಮ್ಮ ಆಂದೋಲನವನ್ನು ಸೇರುವುದಾದರೆ ನಾನವರನ್ನು ವೇದಿಕೆ ಬರಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಕೇಜ್ರಿವಾಲ್, ಭೂಸ್ವಾಧೀನ ಕಾಯ್ದೆಯನ್ನು ಸುಗ್ರೀವಾಜ್ನೆ ಮೂಲಕ ಜಾರಿಗೆ ತಂದಿರುವ ಕೇಂದ್ರದ ಎನ್.ಡಿ.ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಪ್ರಾಪರ್ಟಿ ಡೀಲರಂತೆ ವರ್ತಿಸುತ್ತಿದೆ. ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರಕ್ಕೆ ತುಂಬಾ ಅಹಂಕಾರವಿತ್ತು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಜನತೆ ಪಾಠ ಕಲಿಸಿದರು. ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್ ಗಿಂತಲೂ ಒಂದು ಹೆಜ್ಜೆ ಮುಂದಿದೆ. ಇಂತಹ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಅಣ್ಣಾ ಹಜಾರೆ ನನಗೆ ಗುರು ಹಾಗೂ ತಂದೆಯ ಸಮಾನ ಎಂದ ಸಿಎಂ ಕೇಜ್ರಿವಾಲ್, ದೆಹಲಿ ಸಚಿವಾಲಯಕ್ಕೆ ಬರುವಂತೆ ಅಣ್ಣಾಗೆ ಮನವಿ ಮಾಡಿದರು. ಅಣ್ಣಾ ಹಜಾರೆ ಆಗಮನದಿಂದ ಸಚಿವಾಲಯ ಶುದ್ಧವಾಗುತ್ತದೆ. ಒಳ್ಳೆಯ ಕೆಲಸಕ್ಕೆ ಸ್ಪೂರ್ತಿ ಸಿಗುತ್ತದೆ ಎಂದು ತಿಳಿಸಿದರು.