ಪುಣೆ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ಪುಣೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಪುಣೆಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಪುಣೆಯ 14 ಮತ್ತು ಕರ್ನಾಟಕದ ಬೆಳಗಾವಿ, ದಾವಣಗೆರೆ ಸೇರಿ ದೇಶದ 20 ನಗರಗಳ 69 ಯೋಜನೆಗಳಿಗೆ ಏಕಕಾಲದಲ್ಲಿ ಚಾಲನೆ ನೀಡಿದರು. ಒಟ್ಟು 1770 ಕೋಟಿ ರೂ ಗಳಸ್ಮಾರ್ಟ್ ಸಿಟಿ ಯೋಜನೆ ಇದಾಗಿದೆ.
ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಜತೆಗೆ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ 20 ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸಲಾಗಿತ್ತು. ಆಂಧ್ರ ಪ್ರದೇಶ, ಓಡಿಶಾ, ರಾಜಸ್ಥಾನ ರಾಜ್ಯಗಳು ಸಮಾರಂಭದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗಿಯಾಗಿದ್ದವು.
ಸ್ಮಾರ್ಟ್ ಸಿಟಿ ಮಿಷನ್, ಅಮೃತ್ ಮಿಷನ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳಿಗೆ ಇದೇ ಕಾರ್ಯಕ್ರಮದಲ್ಲಿ ಮೋದಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಗರೀಕರಣ ಒಂದು ಸಮಸ್ಯೆ ಎಂದುಕೊಳ್ಳುವ ಬದಲು, ಬಡತನ ನಿವಾರಣೆಗೆ ಅದೊಂದು ಅವಕಾಶ ಎಂದು ಪರಿಗಣಿಸೋಣ. ರಾಜ್ಯಗಳಿಗೆ ನಾನೊಂದು ಮಾತು ಹೇಳುತ್ತೇನೆ. ಅದೇನೆಂದರೆ, ಇದು ಸ್ಪರ್ಧಾತ್ಮಕ ಯುಗ. ಸ್ಮಾರ್ಟ್ ಆಗಬೇಕು ಎಂದರೆ ಪ್ರತಿ ನಗರವೂ ಸ್ಪರ್ಧೆ ಮಾಡಬೇಕು. ಇದೊಂದು ಸಾಮೂಹಿಕ ಆಂದೋಲನ ಎಂದು ಹೇಳಿದರು.
ಕಸದಿಂದ ರಸ ಸೃಷ್ಟಿಸುವುದೇ ನಮ್ಮ ಗುರಿ. ನಗರಗಳು ಕೇವಲ ಅಭಿವೃದ್ಧಿಯ ಕೇಂದ್ರಗಳಷ್ಟೇ ಅಲ್ಲ. ಬಡತನ ನಿವಾರಣೆಗೆ ಅವು ನಮ್ಮ ಶಕ್ತಿ ಹಾಗೂ ಸಾಮರ್ಥ್ಯ. ಅದಕ್ಕಾಗಿಯೇ ಜನರು ನಗರ ಪ್ರದೇಶಗಳಲ್ಲಿ ಉದ್ಯೋಗ ಹುಡುಕಿಕೊಳ್ಳುತ್ತಾರೆ ಎಂದು ತಿಳಿಸಿದರು.
25 ಲಕ್ಷ ಜನರು ಸ್ಮಾರ್ಟ್ ಸಿಟಿ ಯೋಜನೆ ವಿಚಾರದಲ್ಲಿ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಜನರು ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ದೇಶದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದರು.