ನವದೆಹಲಿ : ನಿರಂತರ ಸೋಲುಗಳಿಂದ ಬೇಸತ್ತಿರುವ ರಾಹುಲ್ ಗಾಂಧಿ ಒಂದು ವಾರಗಳ ಕಾಲ ರಜೆ ಪಡೆದಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು ಕಾಂಗ್ರೆಸ್ ಈಗಾಗಲೇ ದೀರ್ಘಾವಧಿ ರಜೆಯಲ್ಲಿದೆ ಎಂದು ಹೇಳಿದೆ.
ರಾಹುಲ್ ಗಾಂಧಿ ಅವರು ತಾವಾಗಿಯೇ ರಜೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ, ದೇಶದ ಜನತೆಯೇ ರಜೆ ನೀಡಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ, ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೆ ಗೈರು ಹಾಜರಾಗಿರುವುದು ಅವರಿಗೆ ರಾಜಕೀಯ ಜೀವನದ ಬಗ್ಗೆ ಇರುವ ಆಸಕ್ತಿಯನ್ನು ತೋರುತ್ತದೆ ಎಂದು ಹೇಳಿದ್ದಾರೆ.
ಶಿವಸೇನೆ ಸಹ ರಾಹುಲ್ ಗಾಂಧಿ ರಜೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸಂಸತ್ ಅಧಿವೇಶನದಲ್ಲಿ ಭೂಸ್ವಾಧೀನಾ ಕಾಯ್ದೆ ಬಗ್ಗೆ ಮಹತ್ವದ ಚರ್ಚೆ ನಡೆಯಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಕಳೆದುಕೊಂಡಿರುವ ಭೂಮಿಯನ್ನು ವಾಪಸ್ ಪಡೆಯುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಲು ರಜೆ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಬಗ್ಗೆ ದೀರ್ಘವಾಗಿ ಆವಲೋಕನ ನಡೆಸುವ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನದಿಂದ ಒಂದು ವಾರಗಳ ಕಾಲ ರಜೆ ಪಡೆದಿದ್ದಾರೆ. ಅಲ್ಲದೇ ಪಕ್ಷದ ಚಟುವಟಿಕೆಗಳಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ.
ರಾಹುಲ್ ಗಾಂಧಿಯ ಈ ಕ್ರಮಕ್ಕೆ ಬಿಜೆಪಿಯಿಂದ ಟೀಕೆ ವ್ಯಕ್ತವಾಗಿದ್ದು, ರಾಹುಲ್ ಗಾಂಧಿಗೆ ದೇಶದ ಜನತೆಯೇ ಶಾಶ್ವತವಾಗಿ ರಜೆ ನೀಡಿದ್ದಾರೆ ಎಂದು ಜರಿದಿದೆ.