ಬೆಂಗಳೂರು : ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ಜನ ಸಾಮಾನ್ಯರಿಗೆ ತೀವ್ರ ತೊಂದರೆಗಳುಂಟಾಗಿದೆ.
ಮುಷ್ಕರ ಕೈಬಿಡುವಂತೆ ಸರ್ಕಾರದ ಮನವಿಯ ಹೊರತಾಗಿಯೂ ಬಗ್ಗದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸರ್ಕಾರಿ ಬಸ್ ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದೂರದೂರುಗಳಿಗೆ ಹೊರಡುವ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ನಗರದಲ್ಲಿ 64 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವೊಲ್ವೊ, ರಾಜಹಂಸ ಮೊದಲಾದ ಬಸ್ಸುಗಳನ್ನು ಹಾನಿ ಮಾಡಿದ ಘಟನೆಗಳು ಬೆಂಗಳೂರಿನ ಕೆ.ಜಿ.ರಸ್ತೆ, ಯಶವಂತಪುರ, ಮೈಸೂರು ಬ್ಯಾಂಕ್ ವೃತ್ತ, ತುಮಕೂರು ರಸ್ತೆಯ ಜಿಂದಾಲ್ ಬಳಿ ವರದಿಯಾಗಿದೆ.
ಈ ನಡುವೆ ಯಾದಗಿರಿ, ವಿಜಯಪುರಗಳಲ್ಲಿ ಸಂಚಾರ ನಡೆಸಿದ ರಾಜ್ಯ ಸಾರಿಗೆ ಬಸ್ಸುಗಳನ್ನು ದುಷ್ಕರ್ಮಿಗಳು ಕಲ್ಲು ಎಸೆದು ಜಖಂಗೊಳಿಸಿದ ಘಟನೆ ನಡೆದಿದೆ.
ಮುಷ್ಕರ ಹಿನ್ನಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಧಾರವಾಡ, ಬಳ್ಳಾರಿ, ಬೀದರ್, ಕಲಬುರಗಿ, ಚಿತ್ರದುರ್ಗ, ಮಂಡ್ಯ, ರಾಮನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಹಾವೇರಿ, ಉತ್ತರ ಕನ್ನಡ, ಚಿಕ್ಕಮಗಳೂರು, ಯಾದಗಿರಿಗಳಲ್ಲಿ ಜಿಲ್ಲೆಗಳಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.