ಪಾಟ್ನಾ : ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ಜಿತನ್ ರಾಮ್ ಮಾಂಝಿ ರಾಜೀನಾಮೆ ನೀಡೀದ್ದಾರೆ.
ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ರಾಜ್ಯಪಾಲರ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿ ಮಾಡಿರುವ ಜಿತನ್ ರಾಮ್ ಮಾಂಝಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಕಲಾಪವನ್ನು ಮುಂದೂಡಲಾಗಿದೆ.
ರಾಜೀನಾಮೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿತನ್ ರಾಮ್ ಮಾಂಝಿ, ವಿಧಾನಸಭೆಯ ಸ್ಪೀಕರ್, ಸದನದ ಸಂಪ್ರದಾಯವನ್ನು ಪಾಲನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಗುಪ್ತಮತದಾನ ನಡೆಸುವಂತೆ ಸ್ಪೀಕರ್ ಗೆ ಮನವಿ ಮಾಡಲಾಗಿತ್ತು. ಗುಪ್ತಮತದಾನ ನಡೆಸಿದ್ದರೆ ತಾವೇ ಗೆಲ್ಲುವ ಸಾಧ್ಯತೆ ಇತ್ತು ಎಂದು ಮಾಂಝಿ ಹೇಳಿದ್ದಾರೆ.
ಬಿಹಾರದಲ್ಲಿ ಆಡಳಿತಾರೂಢ ಪಕ್ಷವಾಗಿದ್ದ ಜೆಡಿಯುನಲ್ಲಿ ತೀವ್ರ ಭಿನ್ನಮತ ಕಾಣಿಸಿಕೊಂಡು ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ್ದರ ಹಿನ್ನೆಲೆಯಲ್ಲಿ ಫೆ.20ರಂದು ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಜಿತನ್ ರಾಮ್ ಮಾಂಝಿ ಅವರಿಗೆ ಸೂಚನೆ ನೀಡಿದ್ದರು. ರಾಜ್ಯಪಾಲರ ಆದೇಶದಂತೆ ಇಂದು ಜಿತನ್ ರಾಮ್ ಮಾಂಝಿ ವಿಧಾನಸಭೆಯಲ್ಲಿ ತಮ್ಮ ಪರ ವಿಶ್ವಾಸಮತ ಸಾಬೀತುಪಡಿಸಬೇಕಿತ್ತು. ಆದರೆ ಇದಕ್ಕೂ ಮುನ್ನವೇ ಮಾಂಝಿ ರಾಜೀನಾಮೆ ನೀಡಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮಾಂಝಿಗೆ ಬೆಂಬಲಿಸುವುದಾಗಿ ಬಿಜೆಪಿಯೂ ಘೋಷಿಸಿತ್ತು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿ.ಎಂ ನಿತೀಶ್ ಕುಮಾರ್, ಮಾಂಝಿ ಈ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು, ಬಿಜೆಪಿ ಒಳಸಂಚು ಈಗ ಬಯಲಾಗಿದೆ ಎಂದಿದ್ದಾರೆ.