ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಪಿಡಿಪಿ ವಿಧಿಸಿರುವ ಷರತ್ತುಗಳಲ್ಲಿ ಒಂದಾದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎ.ಎಫ್.ಎಸ್.ಪಿ.ಎ) ರದ್ದತಿಗೆ ಭಾರತೀಯ ಸೇನೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಪಿಯೊಂದಿಗೆ ಮಾತುಕತೆ ನಡೆಸಲು ಬಿಜೆಪಿ ಸಿದ್ಧವಾಗಿರುವುದನ್ನು ಗಮನಿಸಿದ್ದ ಆರ್.ಎಸ್.ಎಸ್ ಸಹ ಪಕ್ಷದ ಕ್ರಮಕ್ಕೆ ಸಿಡಿಮಿಡಿಗೊಂಡಿತ್ತು. ಆರ್.ಎಸ್.ಎಸ್ ಬಳಿಕ ಈಗ ಸೇನೆಯಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ ಉಗ್ರರನ್ನು ಮುಂದಿಟ್ಟುಕೊಂಡು ನಡೆಸುವ ಕೃತ್ಯಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಗೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ನೆರವಾಗುತ್ತಿದೆ. ಒಂದು ವೇಳೆ ಪಿಡಿಪಿ ಷರತ್ತಿಗೆ ಮಣಿದು ಭಾರತ ಸರ್ಕಾರ ಕಾಯ್ದೆಯನ್ನು ಸಡಿಲಗೊಳಿಸುವುದಕ್ಕೆ ಮುಂದಾದರೆ ಸಮಸ್ಯೆ ಎದುರಾಗಲಿದೆ ಎಂದು ಸೇನೆ ಆತಂಕ ವ್ಯಕ್ತಪಡಿಸಿದೆ.
ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದಕ್ಕೆ ಸೂಕ್ತವಾಗಿರುವ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿಗೆ ಮನವರಿಕೆ ಮಾಡಲು ಭಾರತೀಯ ಸೇನೆ ಮುಂದಾಗಿದೆ.