ನವದೆಹಲಿ : 'ಜಮ್ಮು-ಕಾಶ್ಮೀರ'ದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಬಹುತೇಕ ಅನಿಶ್ಚಿತತೆಯತ್ತ ಸಾಗಿದೆ. ಸರ್ಕಾರ ರಚನೆ ಹಿನ್ನೆಲೆಯಲ್ಲಿ ಪಿಡಿಪಿ ಪಕ್ಷ ಬಿಜೆಪಿಯಿಂದ ಲಿಖಿತ ರೂಪದಲ್ಲಿ ಕೆಲವು ಭರವಸೆಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದೆ.
ಪಿಡಿಪಿ ಪಕ್ಷದ ವಿಚಾರಗಳಿಗೆ ಬಿಜೆಪಿ ರಾಜಿಮಾಡಿಕೊಳ್ಳುವುದಕ್ಕೆ ಆರ್.ಎಸ್.ಎಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಬೇಕಾದರೆ ಆರ್ಟಿಕಲ್ 370 ಪ್ರಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷಸ್ಥಾನಮಾನಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಹಾಗೂ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎ.ಎಫ್.ಎಸ್.ಪಿ.ಎ)ಯನ್ನು ರದ್ದುಗೊಳಿಸುವ ಸಂಬಂಧ ಬಿಜೆಪಿ ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದಿದೆ.
ಪಿಡಿಪಿ ಪಕ್ಷದ ಬೇಡಿಕೆಗಳಿಗೆ ಕೆಂಡಾಮಂಡಲವಾಗಿರುವ ಆರ್.ಎಸ್.ಎಸ್ ನಾಯಕರು ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಗೆ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಬಹುತೇಕ ಅನಿಶ್ಚಿತತೆಯತ್ತ ಸಾಗಿದೆ.
ಆರ್.ಎಸ್.ಎಸ್ ನಾಯಕರು ಮೈತ್ರಿ ಸರ್ಕಾರಕ್ಕೆ ಅಸಮ್ಮತಿ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಫೆ.23ರಂದು ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆರ್.ಎಸ್.ಎಸ್ ಅಡ್ಡಗಾಲು ಹಾಕಿರುವ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮತ್ತಷ್ಟು ದಿನಗಳವರೆಗೆ ರಾಜ್ಯಪಾಲರ ಆಡಳಿತವೇ ಮುಂದುವರೆಯಲಿದೆ.