ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜನಲೋಕಪಾಲ ವಿಧೇಯಕ ಅಂಗೀಕಾರವಾಗದ ಹಿನ್ನೆಲೆಯಲ್ಲಿ 2014ರ ಫೆ.14ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಸರಿಯಾಗಿ ಒಂದು ವರ್ಷದ ಬಳಿಕ ಮತ್ತೂಮ್ಮೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ರಾಮಲೀಲಾ ಮೈದಾನದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಕೇಜ್ರಿವಾಲ್ ಅವರಿಗೆ ಉಪರಾಜ್ಯಪಾಲ ನಜೀಬ್ ಜಂಗ್ ಅವರು ಗೋಪ್ಯತಾ ವಿಧಿ ಬೋಧಿಸಲಿದ್ದಾರೆ. ಕೇಜ್ರಿವಾಲ್ ಆಪ್ತ ಮನೀಶ್ ಸಿಸೋಡಿಯಾ ಅವರು ಉಪಮುಖ್ಯಮಂತ್ರಿಯಾಗಿ, ಪಕ್ಷದ ಮತ್ತೂಬ್ಬ ನಾಯಕ ಸತ್ಯೇಂದ್ರ ಜೈನ್ ಅವರು ಎರಡನೇ ಬಾರಿಗೆ ಸಚಿವರಾಗಿ ಶಪಥಗ್ರಹಣ ಮಾಡುವ ಸಾಧ್ಯತೆ ಇದೆ.
ಇದೇ ಮೊದಲ ಬಾರಿಗೆ ಶಾಸಕರಾಗಿರುವ ಜಿತೇಂದ್ರ ತೋಮರ್, ಗೋಪಾಲ್ ರಾಯ್, ಸಂದೀಪ್ ಕುಮಾರ್ ಹಾಗೂ ಆಸೀಮ್ ಅಹಮದ್ ಖಾನ್ ಅವರು ಕೇಜ್ರಿವಾಲ್ ಸಂಪುಟ ಸೇರಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ತಮ್ಮ ಮುಂದಿನ ಯೋಜನೆಗಳ ಕುರಿತು ಕೇಜ್ರಿವಾಲ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ.
ರಾಮನಿವಾಸ್ ಗೋಯೆಲ್ ಅವರು ವಿಧಾನಸಭೆಯ ಸ್ಪೀಕರ್ ಆಗಲಿದ್ದು, ಬಂದನಾ ಕುಮಾರಿ ಅವರಿ ಉಪಸ್ಪೀಕರ್ ಆಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.
ಈ ನಡುವೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಕೇಜ್ರಿವಾಲ್ ಅವರು ರೇಡಿಯೋ ಭಾಷಣದ ಮೂಲಕ ಜನತೆಗೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ದೆಹಲಿಯನ್ನು ಪ್ರತಿನಿಧಿಸುವ ಎಲ್ಲ ಸಂಸದರಿಗೂ ಆಹ್ವಾನವಿತ್ತಿದ್ದಾರೆ. ಆದರೆ ಮಹಾರಾಷ್ಟ್ರಕ್ಕೆ ಅನ್ಯ ಕಾರ್ಯಕ್ರಮ ನಿಮಿತ್ತ ತೆರಳುತ್ತಿರುವ ಕಾರಣ ಪ್ರಮಾಣ ವಚನದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಮೋದಿ ಅವರು ಈಗಾಗಲೇ ತಿಳಿಸಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಶಪಥಗ್ರಹಣ ಕಾರ್ಯಕ್ರಮಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. 1200 ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಪ್ರಮಾಣ ವಚನಕ್ಕೂ 1 ದಿನ ಮುನ್ನ ಕೇಜ್ರಿವಾಲ್ ಅವರು ಸಚಿವರ ಖಾತೆ ಹಂಚಿದ್ದಾರೆ. ಪ್ರಮುಖವಾದ ಗೃಹ, ವಿತ್ತ ಖಾತೆಗಳನ್ನು ಕೇಜ್ರಿವಾಲ್ ತಾವೇ ಇರಿಸಿಕೊಂಡಿದ್ದು, ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೆ ನಗರಾಭಿವೃದ್ಧಿ, ಲೋಕೋಪ ಯೋಗಿ, ಶಿಕ್ಷಣ ಖಾತೆ ನೀಡಲಾಗದೆ. ಸತ್ಯೇಂದ್ರ ಜೈನ್ ಅವರಿಗೆ ಆರೋಗ್ಯ, ಕೈಗಾರಿಕೆ; ಗೋಪಾಲ್ ರಾಯ್ ಅವರಿಗೆ ಸಾರಿಗೆ, ಕಾರ್ಮಿಕ ಖಾತೆ; ವಕೀಲ ಜಿತೇಂದ್ರ ತೋಮರ್ ಅವರಿಗೆ ಕಾನೂನು ಖಾತೆ; ಅಸೀಂ ಅಹ್ಮದ್ ಖಾನ್ಗೆ ಆಹಾರ, ನಾಗರಿಕ ಪೂರೈಕೆ ಖಾತೆ; ಸಂದೀಪ್ ಕುಮಾರ್ ಅವರಿಗೆ ಮಹಿಳಾ-ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಈ ನಡುವೆ ದಿಲ್ಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಕೇಂದ್ರ ಸಂಪುಟ ವಾಪಸು ಪಡೆದಿದೆ.