ಬೆಂಗಳೂರು : ಪ್ರಸಕ್ತ ವರ್ಷದ ಮೊದಲ ವಿಧಾನಮಂಡಲ ಅಧಿವೇಶನ ಇಂದು ಮುಕ್ತಾಯಗೊಳ್ಳಲಿದ್ದು, ಮುಂದಿನ ತಿಂಗಳಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ.
ಮಾರ್ಚ್ ನಲ್ಲಿ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನ 13ದಿನಗಳ ಕಾಲ ನಡೆಯಲಿದ್ದು, 2015-16ನೇ ಸಾಲಿನ ಬಜೆಟ್ ಮಾರ್ಚ್ 13ರಂದು ಮಂಡನೆಯಾಗುವ ಸಾಧ್ಯತೆ ಇದೆ. ಫೆ.16ರಿಂದ ಬಜೆಟ್ ಸಿದ್ಧತಾ ಕಾರ್ಯ ಪ್ರಾರಂಭವಾಗಲಿದ್ದು, ಸಿ.ಎಂ ಸಿದ್ದರಾಮಯ್ಯ ಬಜೆಟ್ ಪೂರ್ವತಯಾರಿಯಲ್ಲಿ ನಿರತರಾಗಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ತಮ್ಮ 10ನೇ ಬಾರಿ ಬಜೆಟ್ ಮಂಡಿಸುತ್ತಿರುವುದು ವಿಶೇಷ. ಮುಖ್ಯಮಂತ್ರಿಯಾಗಿ 3ನೇ ಬಜೆಟ್ ಮಂಡಿಸುತ್ತಿದ್ದಾರೆ. ಸಂಯುಕ್ತ ಸರ್ಕಾರ ಇದ್ದಾಗ ಹಾಗೂ ಉಪಮುಖ್ಯಮಂತ್ರಿಯಾಗಿದ್ದಾಗ ಒಟ್ಟು 3 ಬಾರಿ ಬಜೆಟ್ ಮಂಡಿಸಿದ್ದರು.
ಪ್ರಸಕ್ತ ಸಾಲಿನಲ್ಲಿ ಸಿದ್ದರಾಮಯ್ಯ ಸರ್ಕಾರ ವಿತ್ತೀಯ ಕೊರತೆಗೆ 'ತಡೆಗೋಡೆ' ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದ ನಂತರ ಮಂಡಿಸಿರುವ ಎರಡು ಬಜೆಟ್ ಗಳಲ್ಲಿ ಭಾಗ್ಯ ಸರಣಿ ಯೋಜನೆಗಳಿಗೆ ಯಥೇಚ್ಛ ಸಬ್ಸಿಡಿ ನೀಡಲಾಗಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ದಂತ ಭಾಗ್ಯ, ಶಾದಿ ಭಾಗ್ಯ, ವಿದ್ಯಾಸಿರಿ, ಸಾಲಮನ್ನಾ ಸೇರಿದಂತೆ ಜನಪ್ರಿಯ ಯೋಜನೆಗಳ ಮಹಾಪೂರವನ್ನೇ ಸರ್ಕಾರ ಹರಿಸಿದೆ. ಆದರೆ, ಇದರಿಂದ ಬೊಕ್ಕಸ ಬರಿದಾಗಿದ್ದು, ವಿತ್ತೀಯ ಕೊರತೆಗೆ 'ತಡೆಗೋಡೆ' ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್ ನಲ್ಲಿ ಸಿದ್ದರಾಮಯ್ಯ ಕೈಗೊಳ್ಳುವ ಕ್ರಮದ ಬಗ್ಗೆ ಕುತೂಹಲ ಮೂಡಿದೆ.