ಬೆಂಗಳೂರು : ಜೂನ್ 30 ರೊಳಗೆ ಆಧಾರ್ ಮಾಹಿತಿ ಸಲ್ಲಿಸುವಂತೆ ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಈಗಾಗಲೇ ಗಡುವು ನೀಡಿತ್ತು. ಈ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆಯನ್ನೂ ಮಾಡಲಾಗಿತ್ತು. ಅಲ್ಲಿಯವರೆಗೂ ಆಧಾರ್ ಮಾಹಿತಿ ನೀಡದಿದ್ದರೆ ಅಂದರೆ ಸೆಪ್ಟಂಬರ್ ಅಂತ್ಯದೊಳಗೆ ಗ್ರಾಹಕರು ಆಧಾರ್ ಮಾಹಿತಿ ನೀಡದಿದ್ದರೆ ಸಬ್ಸಿಡಿ ಸೇವೆ ಸ್ಥಗಿತಗೊಳ್ಳಲಿದೆ.
ಎಲ್ಜಿಪಿ ಸಂಪರ್ಕಕ್ಕೆ ಆಧಾರ್ ಕೊಟ್ಟರೂ ಕೊಡಬಹುದು ಇಲ್ಲದಿದ್ದರೂ ಪರವಾಗಿಲ್ಲ. ಬ್ಯಾಂಕ್ ಖಾತೆ ವಿವರ, ವಿದ್ಯುತ್ ಬಿಲ್ ವಿವರ ಕೊಟ್ಟರೆ ಸಾಕು ಎಂದು ಹೇಳಿದ್ದ ಕೇಂದ್ರ ಸರ್ಕಾರ ಈಗ ಆಧಾರ್ ಕಡ್ಡಾಯ ಮಾಡಿದ್ದು, ಸಬ್ಸಿಡಿ ಬಯಸುವ ಗೃಹ ಬಳಕೆ ಅಡುಗೆ ಅನಿಲ ಬಳಕೆದಾರರು ಆಧಾರ್ ಮಾಡಿಸಿ ಎಲ್ಪಿಜಿ ವಿತರಕರಿಗೆ ಕೊಡಲೇಬೇಕಾದ ಅನಿವಾರ್ಯತೆಯಿದೆ.
ರಾಜ್ಯದಲ್ಲಿ ಒಂದು ಕೋಟಿವರೆಗೆ ಎಲ್ಪಿಜಿ ಗ್ರಾಹಕರಿದ್ದು ಬೆಂಗಳೂರು, ಮೈಸೂರು, ತುಮಕೂರು, ಬೆಳಗಾವಿ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಆಧಾರ್ ಮಾಹಿತಿ ಕೊಟ್ಟ ಗ್ರಾಹಕರ ಸಂಖ್ಯೆ ಶೇ.75 ರಿಂದ 85 ರವರೆಗೆ ಇದೆ. ಆದರೆ, ಕೆಲವು ಜಿಲ್ಲೆಗಳಲ್ಲಂತೂ ಗ್ರಾಹಕರು ಇನ್ನೂ ಆಧಾರ್ ಕಾರ್ಡ್ ಮಾಡಿಸಿಕೊಂಡಿಲ್ಲ. ಒಂದೊಮ್ಮೆ ಸೆಪ್ಟೆಂಬರ್ 30ರೊಳಗೆ ಆಧಾರ್ ಮಾಹಿತಿ ಕೊಟ್ಟರೆ ಮೂರು ತಿಂಗಳ ಸಬ್ಸಿಡಿ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ . ಆ ನಂತರವೂ ಆಧಾರ್ ಮಾಹಿತಿ ಕೊಡದಿದ್ದರೆ ಶಾಶ್ವತವಾಗಿ ಸಬ್ಸಿಡಿ ಸ್ಥಗಿತಗೊಳ್ಳಲಿದೆ.