ವಾಷಿಂಗ್ ಟನ್ : 'ಧಾರ್ಮಿಕ ಸಹಿಷ್ಣುತೆ' ಬಗ್ಗೆ ಇತ್ತೀಚೆಗಷ್ಟೇ ಭಾರತಕ್ಕೆ ಉಪದೇಶ ನೀಡಿದ್ದ ಅಮೆರಿಕಾದಲ್ಲಿ ಅಲ್ಲಿನ ಪೊಲೀಸರು ಭಾರತೀಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದೆ.
ಗುಜರಾತ್ ಮೂಲದ 57 ವರ್ಷದ ಸುರೇಶ್ ಭಾಯ್ ಪಟೇಲ್ ಎಂಬುವವರು ಮನೆ ಮುಂದೆ ನಡೆದು ಹೋಗುತ್ತಿರಬೇಕಾದರೆ, ಪೊಲೀಸರು ಹಲ್ಲೆ ನಡೆಸಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.
ಸುರೇಶ್ ಭಾಯ್ ಪಟೇಲ್ ಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಎಂಬುದೇ ಪೊಲೀಸರು ಥಳಿಸಿರುವುದಕ್ಕೆ ಕಾರಣ ಎಂದು ತಿಳಿದುಬಂದಿದೆ. ಸುರೇಶ್ ಅವರು ಎರಡು ವಾರಗಳ ಹಿಂದಷ್ಟೇ ಗುಜರಾತಿನಿಂದ ಅಮೆರಿಕಾದಲ್ಲಿರುವ ತಮ್ಮ ಮಗನ ಮನೆಗೆ ತೆರಳಿದ್ದರು. ಪ್ರತಿ ದಿನ ಪಟೇಲ್ ತಮ್ಮ ಮಗನ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದರು.
ಸುರೇಶ್ ಭಾಯ್ ಅವರ ಬಣ್ಣವನ್ನು ನೋಡಿದ ನೆರೆ ನಿವಾಸಿಗಳು, ನಿಶ್ಶಸ್ತ್ರ ಕಪ್ಪು ಜನಾಂಗದ ವ್ಯಕ್ತಿ ಎಂದು ಅನುಮಾನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಉತ್ತರಿಸಲು ಸುರೇಶ್ ಭಾಯ್ ಇಂಗ್ಲೀಷ್ ಭಾಷೆ ಬರದ ಕಾರಣ ಮನಬಂದಂತೆ ಥಳಿಸಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಭಾರತೀಯ ರಾಯಭಾರಿ ಮೂಲಕ ಅಮೆರಿಕಾ ಸರ್ಕಾರವನ್ನು ಒತ್ತಾಯಿಸಿದೆ.
ಇತ್ತೀಚೆಗಷ್ಟೇ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಭಾರತದಲ್ಲಿರುವ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಪ್ರಸ್ತಾಪಿಸಿ ಧಾರ್ಮಿಕ ಸಹಿಷ್ಣುತೆ ಉಳಿಸಿಕೊಳ್ಳುವಂತೆ ಉಪದೇಶ ನೀಡಿದ್ದರು. ಆದರೆ ಅಮೆರಿಕಾದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯುವಲ್ಲಿ ಒಬಾಮ ಸರ್ಕಾರ ವಿಫಲವಾಗಿದ್ದು ಭಾರತೀಯರಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.