ಲಖ್ನೌ : ಪ್ರಧಾನಿ ನರೇಂದ್ರ ಮೋದಿ ತಮ್ಮ ಮಂದಿರ ನಿರ್ಮಿಸಿರುವುದಕ್ಕೆ ಕೆಂಡಾಮಂಡಲರಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಸಚಿವ ಆಜಂ ಖಾನ್ ಮುಲಾಯಂ ಸಿಂಗ್ ಗೂ ಒಂದು ದೇವಾಲಯ ನಿರ್ಮಿಸಬೇಕೆಂದು ಹೇಳಿದ್ದಾರೆ.
ಮುಲಾಯಂ ಸಿಂಗ್ ಹೆಸರಿನಲ್ಲಿ ದೇವಾಲಯವೊಂದನ್ನು ಏಕೆ ನಿರ್ಮಾಣ ಮಾಡಬಾರದು ಎಂದು ಪ್ರಶ್ನಿಸಿರುವ ಆಜಂ ಖಾನ್ ಈ ಬಗ್ಗೆ ನೇತಾಜಿ(ಮುಲಾಯಂ ಸಿಂಗ್) ಬಳಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಆಜಂ ಖಾನ್, ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಜನಪ್ರಿಯ ನಾಯಕನಾಗಿದ್ದು ಲಕ್ಷಾಂತರ ಜನ ಅನುಯಾಯಿಗಳಿದ್ದಾರೆ. ಆದ್ದರಿಂದ ಅವರ ಹೆಸರಿನಲ್ಲಿ ದೇವಾಲಯವನ್ನು ನಿರ್ಮಿಸಬೇಕು ಎಂದಿದ್ದಾರೆ.
ರಾಜ್ ಕೋಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯ ನಿರ್ಮಾಣ ಮಾಡಿದ ಬೆನ್ನಲ್ಲೇ ಆಜಂ ಖಾನ್ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮಂದಿರ ನಿರ್ಮಿಸಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ ಆಜಂ ಖಾನ್ ಮಾತ್ರ ಮುಲಾಯಂ ಸಿಂಗ್ ಯಾದವ್ ಅವರ ದೇವಾಲಯ ಅಗತ್ಯವಾಗಿ ನಿರ್ಮಾಣವಾಗಬೇಕು ಎಂದಿದ್ದಾರೆ.