ಲಖ್ನೌ : ಅಯೋಧ್ಯಾ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಹಿಂದೂ-ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ಉಭಯ ಸಮುದಾಯದ ಮುಖಂಡರುಗಳಾದ ಅಖಿಲ ಭಾರತ ಅಖಾರ ಪರಿಷದ್ನ ನೂತನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹಾಗೂ ಹಿರಿಯ ಮುಸ್ಲಿಮ್ ಮುಖಂಡ ಮತ್ತು ಬಾಬ್ರಿ ಮಸೀದಿ ವ್ಯಾಜ್ಯದಾರ ಹಾಶಿಮ್ ಅನ್ಸಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮಹಾಂತ ನರೇಂದ್ರ ಗಿರಿಯವರು ತಮ್ಮಜೊತೆ ಕೆಲ ಸಾಧು-ಸಂತರನ್ನು ಮಾತುಕತೆಗೆ ಕರೆದೊಯ್ದಿದ್ದರು. ಈ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಅನ್ಸಾರಿ ಜತೆ ಚರ್ಚೆ ನಡೆಸಲಾಗಿದೆ. ಉಭಯ ಸಮುದಾಯದವರಿಗೆ ಅನ್ಯಾಯವಾಗದಂತೆ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುನ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಕೂಡಾ ಆದಷ್ಟು ಬೇಗ ರಾಮ ಮಂದಿರ ಹಾಗೂ ಬಾಬ್ರಿ ಮಸಿದಿ ವಿವಾದ ಕುರಿತು ವಿಚಾರಣೆ ನಡೆಸಬೇಕು ಎಂದು ನರೇಂದ್ರ ಗಿರಿ ಹೇಳಿದ್ದಾರೆ.
ಅನ್ಸಾರಿ ಕೂಡ ಶಾಂತಿ ಒಪ್ಪಂದಕ್ಕೆ ತಯಾರಿದ್ದು, ಎರಡೂ ಸಮುದಾಯದವರಿಗೆ ಒಳ್ಳೆಯದಾಗುವುದಾದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧ ಎಂದಿರುವುದಾಗಿ ತಿಳಿಸಿದ್ದಾರೆ.