ನವದೆಹಲಿ : ನೂತನವಾಗಿ ಆಯ್ಕೆಯಾಗಿರುವ ಶಾಸಕರನ್ನು ನಿಯಂತ್ರಿಸುವುದೇ ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಎದುರಾಗುವ ಬಹುದೊಡ್ಡ ಸವಾಲು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಪ್ರಶಾಂತ್ ಭೂಷನ್ ಅಭಿಪ್ರಾಯಪಟ್ಟಿದ್ದಾರೆ.
ಬೇರೆ ಪಕ್ಷಗಳಿಂದ ಆಮ್ ಆದ್ಮಿ ಪಕ್ಷಕ್ಕೆ ವಲಸೆ ಬಂದು ಆಯ್ಕೆಯಾಗಿರುವವರು ಪಕ್ಷದ ಸಿದ್ಧಾಂತಗಳಿಗೆ ತಿರುಗಿಬೀಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೊಸದಾಗಿ ಆಯ್ಕೆಯಾಗಿರುವ ಶಾಸಕರನ್ನು ನಿಯಂತ್ರಿಸುವುದು ಅರವಿಂದ್ ಕೇಜ್ರಿವಾಲ್ ಅವರಿಗೆ ಎದುರಾಗಲಿರುವ ಬಹುದೊಡ್ಡ ಸವಾಲು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ವಲಸಿಗರು ಕೇವಲ ಗೆಲ್ಲುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿರುತ್ತಾರೆ. ಆದರೆ ಮುಂದಿನ ಯೋಜನೆಗಳ ಬಗ್ಗೆ ಏನೂ ಹೇಳುವುದಿಲ್ಲ. ಈ ಬಗ್ಗೆ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ಸರ್ಕಾರ ರಚನೆಯಲ್ಲಿ ಕೇಜ್ರಿವಾಲ್ ಅವರು ಎಚ್ಚರಿಕೆ ವಹಿಸಬೇಕು, ಪಕ್ಷದ ನಂಬಲರ್ಹ ಶಾಸಕರನ್ನು ಮಾತ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಇಲ್ಲದೇ ಇದ್ದಲ್ಲಿ ಸರ್ಕಾರಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ರಚನೆಯಾದ ಬಳಿಕ ಶಾಸಕರ ನಿಧಿ ಬಳಕೆಯಾಗಿರುವ ಬಗ್ಗೆ ಸಾರ್ವಜನಿಕ ತನಿಖಾಧಿಕಾರಿಯಿಂದ ಆಡಿಟ್ ನಡೆಸಬೇಕೆಂದು ಪ್ರಶಾಂತ್ ಭೂಷಣ್ ಕೇಜ್ರಿವಾಲ್ ಗೆ ಸಲಹೆ ನೀಡಿದ್ದಾರೆ.