ಪಾಟ್ನಾ : ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಈ ನಡುವೆ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರಿಗೆ ಫೆಬ್ರವರಿ 20ರಂದು ಸದನದಲ್ಲಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಸೂಚಿಸಿದ್ದಾರೆ.
ಫೆಬ್ರವರಿ 2೦ ರಂದು ಬಜೆಟ್ ಅಧಿವೇಶನದ ಮೊದಲದಿನವಾಗಿದ್ದು, ರಾಜ್ಯಪಾಲರ ಭಾಷಣದ ನಂತರ ಜಂಟಿ ಅಧಿವೇಶನದಲ್ಲಿ ಮಾಂಝಿ ಅವರು ಬಹುಮತ ಸಾಬೀತುಪಡಿಸಬೇಕು ಎಂದು ರಾಜಭವನದ ಮೂಲಗಳು ತಿಳಿಸಿವೆ.
ಆದರೆ ಮಾಂಝಿ ಸಲ್ಲಿಸಿದ್ದ ರಹಸ್ಯ ಮತದಾನ ಮನವಿಯನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆಯೆ ಇಲ್ಲವೇ ಎಂಬುದು ತಿಳಿದುಬಂದಿಲ್ಲ.
ಫೆ.11ರಂದು ಜೆಡಿಯು ನಾಯಕ ನಿತೀಶ್ ಕುಮಾರ್, ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್, ಆರ್ ಜೆ ಡಿ ನಾಯಕ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಅಧಿನಾಯಕ ಮುಲಾಯಂ ಸಿಂಗ್ ಯಾದವ್ ಒಳಗೊಂಡಂತೆ 130 ಶಾಸಕರ ಜೊತೆ ದೆಹಲಿಯ ರಾಷ್ಟ್ರಪತಿ ಭವನದ ಎದುರು ಪೆರೇಡ್ ನಡೆಸಿ, ತಮ್ಮ ಶಕ್ತಿ ಪ್ರದರ್ಶಿಸಿದ ಹಿನ್ನಲೆಯಲ್ಲಿ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ.