ನವದೆಹಲಿ : ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಇನ್ನೂ ಮುಂದುವರೆದಿದ್ದು, ಸರ್ಕಾರ ರಚನೆಗೆ ಆಹ್ವಾನ ನೀಡಿವಂತೆ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಮೇಲೆ ಒತ್ತಡ ಹೇರಲು ಜೆಡಿಯು ನಾಯಕ ನಿತೀಶ್ ಕುಮಾರ್, ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೂರು ನೀಡಿ ರಾಷ್ಟ್ರಪತಿ ಭವನದ ಮುಂದೆ ಪೆರೇಡ್ ನಡೆಸಲಿದ್ದಾರೆ.
ತಾವು ಸರ್ಕಾರ ರಚನೆಗೆ ಬೇಡಿಕೆಯಿಟ್ಟು 24 ಘಂಟೆಗಳು ಕಳೆದರೂ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರುವುದಕ್ಕೆ ಅಸಮಧಾನಗೊಂಡಿರುವ ನಿತೀಶ್ ಕುಮಾರ್, ತಮ್ಮ 13೦ ಬೆಂಬಲಿಗ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ನಂತರ ಜೀತನ್ ರಾಂ ಮಾಂಝಿ ಅವರಿಗೆ ಕುದುರೆ ವ್ಯಾಪಾರಕ್ಕೆ ಹಸಿರು ನಿಶಾನೆ ಸಿಕ್ಕಿರುವ ಹಾಗೆ ಕಾಣುತ್ತದೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದಾರೆ.
ಅಲ್ಲದೇ ತಾವು 130 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸ್ಸಿದ್ದರೂ ಸಹ ಸರ್ಕಾರ ರಚನೆಗೆ ಆಹ್ವಾನ ನೀಡದೇ ತಡ ಮಾಡುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ನಿತೀಶ್ ದೂರಿದ್ದಾರೆ.