ನವದೆಹಲಿ : ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್, ಫೆ.14ರಂದು ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
2015ರ ಹೈವೋಲ್ಟೆಜ್ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ನಿರ್ಮಿಸಿದ್ದು, ಕೇಜ್ರಿವಾಲ್ ಸುನಾಮಿ ಅಲೆಯಲ್ಲಿ ಬಿಜೆಪಿ ಕೊಚ್ಚಿಹೋಗಿದೆ. ಕಾಂಗ್ರೆಸ್ ಕೂಡಾ ಧೂಳೀಪಟವಾಗಿದೆ. 70 ಸದಸ್ಯಬಲದ ವಿಧಾನಸಭೆಯಲ್ಲಿ ಎಎಪಿ 67 ಸ್ಥಾನ ಪಡೆದು ಪ್ರಚಂಡ ಜಯಭೇರಿ ಬಾರಿಸಿದೆ. ಬಿಜೆಪಿ ಕೇವಲ 03 ಸ್ಥಾನ ಪಡೆದರೆ, ಕಾಂಗ್ರೆಸ್ ಸಾಧನೆ ಮಾತ್ರ ಈ ಬಾರಿ ಶೂನ್ಯವಾಗಿದೆ.
ಈ ನಿಟ್ಟಿನಲ್ಲಿ ಅರವಿಂದ್ ಕೇಜ್ರಿವಾಲ್ ಫೆ.14ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಗಾಜಿಯಾಬಾದ್ನಿಂದ ಮೆರವಣಿಗೆಯಲ್ಲಿ ರಾಮ್ಲೀಲಾ ಮೈದಾನಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಜ್ರಿವಾಲ್ ಆಹ್ವಾನಿಸಿದ್ದಾರೆ. ಅಲ್ಲದೇ ಕೇಂದ್ರದ ಎಲ್ಲಾ ಸಚಿವರನ್ನು ಹಾಗೂ ಕಿರಣ ಬೇಡಿ, ಅಣ್ಣಾ ಹಜಾರೆ ಅವರಿಗೂ ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ಆಹ್ವಾನಿಸಲಾಗಿದೆ.
ವಿಶೇಷವೆಂದರೆ ಕಳೆದ ವರ್ಷ ಅಂದರೆ 2014ರ ಫೆ.14ರಂದೇ ಕೇಜ್ರಿವಾಲ್, ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ಬಾರಿ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ನೂಪುರ್ ಶರ್ಮಾ ವಿರುದ್ಧ 31,583 ಮತಗಳ ಭಾರೀ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಹಿಂದಿನ ಬಾರಿ ಕೂಡಾ ಕೇಜ್ರಿವಾಲ್ ರಾಮ್ಲೀಲಾ ಮೈದಾನದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು.