ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರವಿಂದ್ ಕೇಜ್ರಿವಾಲ್ ಗೆ ಅಭಿನಂದನೆ ತಿಳಿಸಿದ್ದಾರೆ.
ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಆಪ್ ಗೆಲುವಿಗೆ ಶುಭಕೋರಿದ್ದು, ಕೇಜ್ರಿವಾಲ್ ಅವರಿಗೆ ಚಹಾಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ದೆಹಲಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಕೇಜ್ರಿವಾಲ್ ಜತೆ ನಾನು ಮಾತುಕತೆ ನಡೆಸುತ್ತೇನೆ. ಚಹಾಗೂ ಆಹ್ವಾನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಆಪ್ ಅಭೂತಪೂರ್ವ ಯಶಸ್ಸಿಗೆ ಕೇಜ್ರಿವಾಲ್ ಗೆ ಟ್ವಿಟರ್ ಮೂಲಕ ಬಿಜೆಪಿಯ ಕಿರಣ್ ಬೇಡಿ ಅಭಿನಂದನೆ ಸಲ್ಲಿಸಿದ್ದಾರೆ. ದೆಹಲಿ ಮತದಾರರು ಆಮ್ ಆದ್ಮಿ ಪಕ್ಷಕ್ಕೆ ಫುಲ್ ಮಾರ್ಕ್ಸ್ ನೀಡಿದ್ದು, ಕೇಜ್ರಿವಾಲ್ ಉತ್ತಮ ಆಡಳಿತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ನಡುವೆ.ಮಹಾರಾಷ್ಟ್ರದ ರಾಲೆಗಣಸಿದ್ಧಿಯಲ್ಲಿರುವ ಅಣ್ಣಾ ಹಜಾರೆಗೆ ದೂರವಾಣಿ ಮೂಲಕ ಕರೆ ಮಾಡಿರುವ ಅರವಿಂದ್ ಕೇಜ್ರಿವಾಲ್ ದೆಹಲಿ ಚುನಾವಣೆಯಲ್ಲಿ ಆಪ್ ಯಶಸ್ಸಿನ ಬಗ್ಗೆ ಹೇಳಿದ್ದು, ಫೆ.14 ಅಥವಾ 15ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದಾರೆ.
ಕೇಜ್ರಿವಾಲ್ ಗೆ ಅಭಿನಂದನೆ ಸಲ್ಲಿಸಿದ ಅಣ್ಣಾ ಹಜಾರೆ, ಬ್ಜೆಪಿ ವಿರುದ್ಧ ವಾಗ್ದಾಳಿ ನಎಸಿದರು. ಈ ಸೋಲು ಬಿಜೆಪಿಯ ಸೋಲು, ಮೋದಿ ಸೋಲು. ಅಚ್ಚೇ ದಿನಗಳು ಕೇವಲ ಉದ್ಯಮಪತಿಗಳಿಗೆ ಮಾತ್ರ ಬಂದಿದೆ. ಮೋದಿ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಹೇಳಿದ್ದಾರೆ.