ನವದೆಹಲಿ : 'ಭಾರತ' ಹಿಂದೂ ರಾಷ್ಟ್ರವಾಗಿದ್ದು, ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಲು ಇದು ಸಕಾಲ ಎಂದು ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಿದ್ಧ ಕವಿ ರವೀಂದ್ರನಾಥ್ ಠಾಗೂರರ ಹೇಳಿಕೆಯನ್ನು ಉಲ್ಲೇಖಿಸಿರುವ ಮೋಹನ್ ಭಾಗವತ್ 'ಹಿಂದೂ ಮುಸ್ಲಿಮಮರಲ್ಲಿ ಘರ್ಷಣೆಗಳು ಉಂಟಾದ ಸಂದರ್ಭದಲ್ಲಿ ಮಧ್ಯಮ ಮಾರ್ಗವೊಂದು ಉದ್ಭವಿಸುತ್ತದೆ, ಆ ಮಾರ್ಗ ಹಿಂದುತ್ವವಾಗಿರುತ್ತದೆ' ಎಂದು ಹೇಳಿದ್ದಾರೆ.
ಹಿಂದೂಸ್ಥಾನ ಹಿಂದೂ ರಾಷ್ಟ್ರ ಎಂಬುದು ವಾಸ್ತವ ಅಂಶ, ನಾವು ಇದೇ ವಾಸ್ತವದೊಂದಿಗೆ ಮುಂದುವರೆಯಲಿದ್ದೇವೆ. ನಮ್ಮ ದೇಶವನ್ನು ಶ್ರೇಷ್ಠ ರಾಷ್ಟ್ರವನ್ನಾಗಿಸಲು ಎಲ್ಲಾ ಹಿಂದೂಗಳನ್ನು ಒಗ್ಗೂಡಿಸಬೇಕಿದೆ ಎಂದು ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ನಾವು ಏನು ಮಾಡಬೇಕೆಂಬುದರ ಬಗ್ಗೆ ಪ್ರಾಯೋಗಿಕ ಜ್ಞಾನವಿದೆ, ನಮ್ಮಲ್ಲೇ ಒಡಕಿದ್ದರೆ ಈ ಸಂವಿಧಾನ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಅನೇಕ ಸವಾಲುಗಳ ನಡುವೆ ಹಿಂದೂಗಳನ್ನು ಒಗ್ಗೂಡಿಸಲು ಆರ್.ಎಸ್.ಎಸ್ ಸ್ಥಾಪಕರಾದ ಕೆ.ಬಿ ಹೆಡಗೇವಾರ್ ಆರ್.ಎಸ್.ಎಸ್ ನ ಶಾಖೆಗಳನ್ನು ಪ್ರಾರಂಭಿಸಿದ್ದರು. ಹಿಂದೂಗಳನ್ನು ಒಗ್ಗೂಡಿಸಲು ಅಂದಿಗಿಂತಲೂ ಇಂದು ಅನುಕೂಲಕರ ಸ್ಥಿತಿ ನಿರ್ಮಾಣವಾಗಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.