ನವದೆಹಲಿ : ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ವಿಪಕ್ಷಗಳಿಗೆ ಕಾಮನ್ ಸೆನ್ಸ್ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ನಮ್ಮ ಜನಪ್ರಿಯತೆ ಸಹಿಸದೇ ಆರೋಪ ಮಾಡುತ್ತಿದ್ದಾರೆ ಎಂದು ಗುಡುಗಿದರು. ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ನ್ಯಾ.ಕೆಂಪಣ್ಣ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸುತ್ತೇವೆ. ಒಂದುವರೆ ಲಕ್ಷ ಪುಟಗಳ ದಾಖಲೆಗಳನ್ನು ಸಲ್ಲಿಸುತ್ತಿದ್ದು, ಅದಕ್ಕಾಗಿ ಕಾಲಾವಕಾಶ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಹೊರತಂದಿರುವ ಪುಸ್ತಕದಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ ಎಂದು ವ್ಯಂಗ್ಯವಾಡಿರುವ ಸಿಎಂ, ನಾನು ಒಂದಿಂಚು ಜಾಗವನ್ನೂ ಡಿನೋಟಿಫೈ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವಿಣ್ ತೊಗಾಡಿಯಾ ಅವರಿಗೆ ಹಿಂದೂ ಸಮಾಜೋತ್ಸವದಲ್ಲಿ ವೀಡಿಯೋ ಭಾಷಣಕ್ಕೂ ಅವಕಾಶ ನೀಡಲ್ಲ ಎಂದು ಸ್ಪಷ್ಟ ಪಡಿಸಿದರು.
ತೊಗಾಡಿಯಾ ವಿರುದ್ಧ ರಾಜ್ಯದಲ್ಲಿ 3 ಕೇಸ್ ಗಳು ದಾಖಲಾಗಿವೆ. ದೇಶದಲ್ಲಿ 45 ಕೇಸ್ ಗಳು ದಾಖಲಾಗಿವೆ. ಪ್ರಚೋದನಕಾರಿ ಭಾಷಣ ತಡೆಯುವುದೇ ನಮ್ಮ ಉದ್ದೇಶ. ಹೀಗಾಗಿ ತೊಗಾಡಿಯಾಗೆ ಭಾಷಣಕ್ಕೆ ಅವಕಾಶ ನೀಡಲ್ಲ ಎಂದು ತಿಳಿಸಿದರು.